ADVERTISEMENT

ಮನೆ ಕಂಡು ಕಣ್ಣೀರಿಟ್ಟ ಕುಟುಂಬ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 23:07 IST
Last Updated 13 ಆಗಸ್ಟ್ 2020, 23:07 IST
ಗಲಭೆಯಿಂದ ಹಾನಿಗೊಂಡಿರುವ ಮನೆಯಲ್ಲಿ ಕುಟುಂಬ ಸದಸ್ಯರು
ಗಲಭೆಯಿಂದ ಹಾನಿಗೊಂಡಿರುವ ಮನೆಯಲ್ಲಿ ಕುಟುಂಬ ಸದಸ್ಯರು   

ಬೆಂಗಳೂರು: ಮಂಗಳವಾರ ಸಂಜೆಯೇ ಮನೆಯಿಂದ ಹೊರಗೆ ಹೋಗಿದ್ದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಕುಟುಂಬದವರು, ಗುರುವಾರ ಬೆಳಿಗ್ಗೆ ತಮ್ಮ ಮನೆಗೆ ಬಂದು ಸುಟ್ಟ ಸ್ಥಿತಿಯನ್ನು ನೋಡಿ ಕಣ್ಣೀರಿಟ್ಟರು.

ತಂದೆ– ತಾಯಿ ವಾಸವಿದ್ದ ಮನೆಯಲ್ಲಿ ಶ್ರೀನಿವಾಸಮೂರ್ತಿ ಕುಟುಂಬ ವಾಸವಿತ್ತು. ಮಂಗಳವಾರ ಮಧ್ಯಾಹ್ನವೇ ಶಾಸಕರು ಕೆಲಸ ನಿಮಿತ್ತ ಹೊರಗಡೆ ಬಂದಿದ್ದರು. ಕುಟುಂಬದ ಸದಸ್ಯರು, ದೇವಸ್ಥಾನಕ್ಕೆ ಹೋಗಿದ್ದರು. ಸಂಬಂಧಿಯೊಬ್ಬರು ಮಾತ್ರ ಮನೆಯಲ್ಲಿದ್ದರು.

ಅದೇ ಸಂದರ್ಭದಲ್ಲಿ ಮನೆ ಬಳಿ ಬಂದಿದ್ದ ಕಿಡಿಗೇಡಿಗಳು, ಪೀಠೋಪಕರಣ ಹಾಗೂ ಬಟ್ಟೆ ಸೇರಿದಂತೆ ಎಲ್ಲ ವಸ್ತುಗಳಲ್ಲಿ ಚೆಲ್ಲಾಪಿಲ್ಲಿ ಮಾಡಿದ್ದರು. ನಂತರ, ಇಡೀ ಮನೆಗೆ ಬೆಂಕಿ ಹಚ್ಚಿದ್ದರು. ನಸುಕಿನವರೆಗೂ ಬೆಂಕಿ ಇತ್ತು.

ADVERTISEMENT

ಗಲಭೆ ಸ್ಥಿತಿ ನಿರ್ಮಾಣವಾಗಿದ್ದರಿಂದ ಶಾಸಕರು ಹಾಗೂ ಅವರ ಕುಟುಂಬದವರನ್ನು ಮನೆ ಬಳಿ ಬಿಡದೇ ಪೊಲೀಸರು ತಡೆದಿದ್ದರು. ಗುರುವಾರ ಬೆಳಿಗ್ಗೆ ಮನೆ ಬಳಿ ಹೋಗಲು ಅವಕಾಶ ನೀಡಿದರು. ಮನೆ ಒಳಗೆ ಸುತ್ತಾಡಿದ ಕುಟುಂಬ, ಸಂಪೂರ್ಣ ಸುಟ್ಟ ಮನೆ ಕಂಡು ಗೋಳಾಡಿದರು. ಪ್ರತಿಯೊಂದು ವಸ್ತುವಿನ ಅವಶೇಷಗಳನ್ನು ನೋಡಿ ಬಿಕ್ಕಿ ಅತ್ತರು.

ಸುದ್ದಿಗಾರರ ಜೊತೆ ಮಾತನಾಡಿದ ಕುಟುಂಬದ ಸದಸ್ಯರು, ‘ನಮಗೆ ನ್ಯಾಯ ಬೇಕು’ ಎಂದು ಒತ್ತಾಯಿಸಿದರು.

ದೂರು ನೀಡದ ಶಾಸಕ: ಮನೆ ಮೇಲೆ ದಾಳಿ ನಡೆಸಿ ಸುಟ್ಟಿರುವ ಬಗ್ಗೆ ಶ್ರೀನಿವಾಸಮೂರ್ತಿ ಅವರು ಇದುವರೆಗೂ ಠಾಣೆಗೆ ದೂರು ನೀಡಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮನೆ ಬಳಿ ಬರಲು ಪೊಲೀಸರು ಬಿಟ್ಟಿರಲಿಲ್ಲ. ಈಗ ಬಂದಿದ್ದೇನೆ. ಶೀಘ್ರವೇ ದೂರು ನೀಡುತ್ತೇನೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.