ADVERTISEMENT

ಬೆಂಗಳೂರು | ಲಿಂಗರಾಜಪುರಂ ಕಲುಷಿತ ನೀರು: ಜಲಮಂಡಳಿಯಿಂದ ತ್ವರಿತ ಕ್ರಮ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 8:27 IST
Last Updated 4 ಜನವರಿ 2026, 8:27 IST
   

ಬೆಂಗಳೂರು: ಲಿಂಗರಾಜಪುರಂ ಪ್ರದೇಶದಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಬಂದ ವರದಿಗಳನ್ನು ಬೆಂಗಳೂರು ಜಲಮಂಡಳಿ ಗಂಭೀರವಾಗಿ ಪರಿಗಣಿಸಿದೆ.

ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ ಸ್ಪಂದಿಸಿರುವ ಮಂಡಳಿಯು, ಪೀಡಿತ ಪ್ರದೇಶಗಳಿಗೆ ನೀರು ಸರಬರಾಜನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿದೆ.

ಕಲುಷಿತ ನೀರು ಸೇರ್ಪಡೆಯಾಗುತ್ತಿರುವ ಮೂಲವನ್ನು ನಿಖರವಾಗಿ ಮತ್ತು ತ್ವರಿತವಾಗಿ ಪತ್ತೆಹಚ್ಚಲು, ಜಲಮಂಡಳಿಯು ತನ್ನ ಸಿಬ್ಬಂದಿಯೊಂದಿಗೆ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನವನ್ನು ಬಳಸಿ ತಪಾಸಣೆ ಆರಂಭಿಸಿದೆ.

ADVERTISEMENT

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್, "ಇಡೀ ಪ್ರದೇಶವನ್ನು ಅಗೆಯುವ ಬದಲು, ದೋಷವಿರುವ ಜಾಗವನ್ನು ನಿಖರವಾಗಿ ಪತ್ತೆಹಚ್ಚಲು ಲಭ್ಯವಿರುವ ಎಲ್ಲ ತಾಂತ್ರಿಕ ಸಂಪನ್ಮೂಲಗಳನ್ನು ಬಳಸುತ್ತಿದ್ದೇವೆ" ಎಂದು ತಿಳಿಸಿದರು.

ದುರಸ್ತಿ ಕಾರ್ಯದ ಸಮಯದಲ್ಲಿ ನಿವಾಸಿಗಳಿಗೆ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಲು, ಜಲಮಂಡಳಿ ಈಗಾಗಲೇ 'ಸಂಚಾರಿ ಕಾವೇರಿ' ಮೊಬೈಲ್ ಟ್ಯಾಂಕರ್‌ಗಳನ್ನು ನಿಯೋಜಿಸಿದೆ. ನಿನ್ನೆಯಿಂದಲೇ ಎಲ್ಲಾ ಪೀಡಿತ ಮನೆಗಳಿಗೆ ಉಚಿತ ಹಾಗೂ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.

ಆದ್ಯತೆಯ ವಿಷಯವಾಗಿ ಪರಿಗಣಿಸಿರುವ ಮಂಡಳಿಯು, ಇಂಜಿನಿಯರಿಂಗ್ ತಂಡಕ್ಕೆ ಕಟ್ಟುನಿಟ್ಟಿನ ಗಡುವು ನೀಡಿದೆ. "ನಾಳೆ ಸಂಜೆಯೊಳಗೆ ಮೂಲವನ್ನು ಪತ್ತೆಹಚ್ಚಿ, ಪೈಪ್‌ಲೈನ್ ಸರಿಪಡಿಸಿ, ಶುದ್ಧ ನೀರು ಸರಬರಾಜನ್ನು ಪುನರಾರಂಭಿಸಲು ನಿರ್ದೇಶನ ನೀಡಲಾಗಿದೆ" ಎಂದು ಅಧ್ಯಕ್ಷರು ತಿಳಿಸಿದ್ದಾರೆ.

ಪೈಪ್‌ಲೈನ್ ಮೂಲಕ ನೀರು ಪೂರೈಕೆ ಪುನರಾರಂಭವಾಗುವವರೆಗೆ ನಿವಾಸಿಗಳು ಅಧಿಕಾರಿಗಳೊಂದಿಗೆ ಸಹಕರಿಸಬೇಕು ಮತ್ತು ಒದಗಿಸಲಾಗುತ್ತಿರುವ ಉಚಿತ ವಾಟರ್ ಟ್ಯಾಂಕರ್ ಸೇವೆಯನ್ನು ಬಳಸಿಕೊಳ್ಳಬೇಕೆಂದು ಕೋರಲಾಗಿದೆ.

ರೋಬೋಟಿಕ್ ತಂತ್ರಜ್ಞಾನದ ಮೂಲಕ ಪತ್ತೆ ಕಾರ್ಯ; ನಾಳೆ ಸಂಜೆಯೊಳಗೆ ಸಮಸ್ಯೆ ಬಗೆಹರಿಸಲು ಗಡುವು

•ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ನೀರು ಸರಬರಾಜು ತಕ್ಷಣ ಸ್ಥಗಿತ

•'ಸಂಚಾರಿ ಕಾವೇರಿ' ಟ್ಯಾಂಕರ್‌ಗಳ ಮೂಲಕ ಉಚಿತ ನೀರು ಪೂರೈಕೆ

•ಸೋರಿಕೆ ಮೂಲ ಪತ್ತೆಗೆ ಅತ್ಯಾಧುನಿಕ ರೋಬೋಟಿಕ್ಸ್ ಮತ್ತು ಸಿಬ್ಬಂದಿ ಬಳಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.