ಬೆಂಗಳೂರು: ಬೆಸ್ಕಾಂ ವಿದ್ಯುತ್ ಬಿಲ್ ಕಲೆಕ್ಟರ್ ಸೋಗಿನಲ್ಲಿ ಮನೆಯೊಂದಕ್ಕೆ ಹೋಗಿದ್ದ ಆರೋಪಿಯೊಬ್ಬ, ವಿದ್ಯುತ್ ಬಿಲ್ರಶೀದಿ ಕೇಳುವ ನೆಪದಲ್ಲಿ ಯುವತಿಯೊಬ್ಬರ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿದ್ದಾನೆ.
ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಚಿನ್ನಾಭರಣ ಕಳೆದುಕೊಂಡಿರುವ ಕೃಷ್ಣಪ್ಪನಗರ ನಿವಾಸಿ ಅನಿತಾ ಎಂಬುವರು ಠಾಣೆಗೆ ದೂರು ನೀಡಿದ್ದಾರೆ.
‘ತಂದೆ–ತಾಯಿ ಜೊತೆ ಯುವತಿ ನೆಲೆಸಿದ್ದಾರೆ. ಜುಲೈ 9ರಂದು ಬೆಳಿಗ್ಗೆ ತಂದೆ–ತಾಯಿ ಕೆಲಸಕ್ಕೆ ಹೋಗಿದ್ದರು. ಯುವತಿ ಮನೆಯಲ್ಲೇ ಇದ್ದರು. ಅದೇ ಸಂದರ್ಭದಲ್ಲೇ ಮನೆಗೆ ಬಂದಿದ್ದ ಆರೋಪಿ, ವಿದ್ಯುತ್ ಬಿಲ್ ಕಲೆಕ್ಟರ್ ಎಂದು ಪರಿಚಯಿಸಿಕೊಂಡಿದ್ದ. ಯುವತಿ ಮೈ ಮೇಲಿನ ಚಿನ್ನದ ಆಭರಣ ನೋಡಿದ್ದ ಆರೋಪಿ, ‘ಈ ರೀತಿ ಆಭರಣ ಹಾಕಿಕೊಂಡು ಪ್ರದರ್ಶಿಸಬೇಡಿ. ಕಳ್ಳರು ಹೆಚ್ಚಾಗಿದ್ದಾರೆ. ಬಿಚ್ಚಿಕೊಡಿ ಹಾಳೆಯಲ್ಲಿ ಸುತ್ತಿ ಕೊಡುತ್ತೇನೆ’ ಎಂದಿದ್ದ. ಅದನ್ನು ನಂಬಿದ್ದ ಯುವತಿ, ಆಭರಣ ಬಿಚ್ಚಿ ಕೊಟ್ಟಿದ್ದರು’ ಎಂದು ಪೊಲೀಸರು ಹೇಳಿದರು.
‘ವಿದ್ಯುತ್ ಬಿಲ್ ರಶೀದಿ ತರುವಂತೆ ಹೇಳಿ ಯುವತಿಯನ್ನು ಮನೆಯೊಳಗೆ ಕಳುಹಿಸಿದ್ದ ಆರೋಪಿ, ಸ್ಥಳದಿಂದ ಪರಾಗಿಯಾಗಿದ್ದಾನೆ. 9 ಗ್ರಾಂ ಓಲೆ ಮತ್ತು 18 ಗ್ರಾಂ ಚಿನ್ನದ ಸರವನ್ನು ಆರೋಪಿ ಕೊಂಡೊಯ್ದಿರುವುದಾಗಿ ಯುವತಿ ದೂರಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.