ಬೆಂಗಳೂರು: ರಂಗಭೂಮಿ ಸಮಾಜವನ್ನು ತಿದ್ದುವ ಬಹುದೊಡ್ಡ ಮಾಧ್ಯಮವಾಗಿದೆ ಎಂದು ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಹೇಳಿದರು.
ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ನಾಟಕ ಶಾಲೆ, ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ‘ಭಾರತ ರಂಗ ಮಹೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ನನಗೆ ಸಲ್ಲಿಸಿದ ಈ ರಂಗ ಮಹೋತ್ಸವದ ಗೌರವವನ್ನು ಸಿಜಿಕೆ ಅವರಿಗೆ ಅರ್ಪಿಸುತ್ತೇನೆ’ ಎಂದರು.
‘ರಂಗಭೂಮಿ ಎಂಬ ಮಾಧ್ಯಮವನ್ನು ಸರ್ಕಾರ ಹಾಗೂ ಎಲ್ಲ ಅಕಾಡೆಮಿಗಳು ಬೆಂಬಲಿಸಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬಹುದೊಡ್ಡ ಕೆಲಸಗಳನ್ನು ಮಾಡುತ್ತಿದೆ. ರಾಷ್ಟ್ರೀಯ ನಾಟಕ ಶಾಲೆಯ ಸಹಯೋಗದಲ್ಲಿ ಭಾರತ ರಂಗಮಹೋತ್ಸವ ಆಯೋಜಿಸುವ ಮೂಲಕ ದೇಶ–ವಿದೇಶಗಳ ನಾಟಕಗಳನ್ನು ಬೆಂಗಳೂರಿನಲ್ಲಿ ಪ್ರಸ್ತುತಿ ಪಡಿಸುತ್ತಿರುವುದು ಶ್ಲಾಘನೀಯ’ ಎಂದರು.
‘ನಾನು ಮೊದಲು ಕವಿತೆಗಳನ್ನು ಬರೆದುಕೊಂಡಿದ್ದೆ. ನನ್ನನ್ನು ನಾಟಕಗಳಿಗೆ ಕರೆತಂದವರು ಸಿಜಿಕೆ, ಅವರು ಕನ್ನಡ ರಂಗಭೂಮಿಯ ದೊಡ್ಡ ದಂತಕಥೆ. ನನ್ನತಂಹ ನೂರಾರೂ ಕವಿಗಳನ್ನು, ನಾಟಕಕಾರರನ್ನಾಗಿ ರಂಗಭೂಮಿಗೆ ಪರಿಚಯಿಸಿದ ಕೀರ್ತಿ ಸಿಜಿಕೆ ಅವರಿಗೆ ಸಲ್ಲುತ್ತದೆ. ನಾನು ನಾಟಕಗಳನ್ನು ಬರೆಯಲು ಅವರ ಪ್ರೇರಣೆಯೇ ಮುಖ್ಯವಾಗಿತ್ತು. ಕವಿಯಾಗಿದ್ದ ನನ್ನನ್ನು ನಾಟಕಕಾರನ್ನಾಗಿ ಮಾಡಿದರು. ಭಾರತ ರಂಗ ಮಹೋತ್ಸವ ಬಹಳ ಚೆನ್ನಾಗಿ ನಡೆಯುತ್ತಿದೆ. ಈ ರಂಗ ಮಹೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸುತ್ತಿದ್ದಾರೆ ಎಂದು ಹೇಳಿದರು.
ರಂಗ ಸಂಪದ ಜೆ. ಲೋಕೇಶ್, ನಾಗರಾಜಮೂರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ನಿರ್ದೇಶಕಿ ವೀಣಾ ಶರ್ಮಾ, ಉತ್ಸವದ ನಿರ್ದೇಶಕ ಬಿ. ಸುರೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.