ADVERTISEMENT

ಜನ್ನಿ, ಬಿ. ಜಯಶ್ರೀ ಅವರಿಂದ ಬಿಐಸಿಯಲ್ಲಿ ಸಂಗೀತ ಸಂಜೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2022, 19:51 IST
Last Updated 26 ಡಿಸೆಂಬರ್ 2022, 19:51 IST
ಬಿ.ಜಯಶ್ರಿ
ಬಿ.ಜಯಶ್ರಿ   

ಬೆಂಗಳೂರು: ಜನಮನ ಸಾಂಸ್ಕೃತಿಕ ಸಂಘಟನೆಯ ಸಂಸ್ಥಾಪಕ ಹಾಗೂ ಖ್ಯಾತ ಗಾಯಕ ಎಚ್‌.ಜನಾರ್ದನ ಅವರ ಹಾಡುಗಳೊಂದಿಗೆ ಜನಮನ ಸ್ಪಂದನ ಕಾರ್ಯಕ್ರಮ ದೊಮ್ಮಲೂರು ಬಳಿ ಇರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ(ಬಿಐಸಿ) ಇದೇ 27ರಂದು ಮಂಗಳವಾರ ನಡೆಯಲಿದೆ.

ಸಂಜೆ 7 ಗಂಟೆಯಿಂದ 8.30ರ ವರೆಗೆ ಜನಾರ್ದನ ಅವರು ದಲಿತ ಗೀತೆಗಳು, ಜಾನಪದ ಮತ್ತು ಕ್ರಾಂತಿ ಗೀತೆಗಳನ್ನು ಹಾಡಲಿದ್ದಾರೆ. ಮೈಸೂರು ಮೂಲದ ಜನಾರ್ದನ್ ಅವರು ಮೂರು ದಶಕಗಳಿಂದ ನಾಟಕ, ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ರಂಗಾಯಣದ ಸ್ಥಾಪನೆಯಲ್ಲಿ ಬಿ.ವಿ. ಕಾರಂತ ಅವರೊಂದಿಗೆ ಸಕ್ರಿಯ ಪಾತ್ರ ವಹಿಸಿದ್ದ ಜನಾರ್ದನ್, ರಂಗಾಯಣದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಚಿತ್ರರಂಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಹಿನ್ನೆಲೆ ಗಾಯಕರಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜನಾರ್ದನ್ ನೇತೃತ್ವದ ಜನಮನ ತಂಡದಿಂದ ಜಾನಪದ ಗೀತೆಗಳು, ವಚನಗಳು, ರಂಗ ಗೀತೆ, ಹೋರಾಟದ ಗೀತೆಗಳ ಕಾರ್ಯಕ್ರಮ ನಡೆಯಲಿದೆ ಎಂದು ಬಿಐಸಿ ತಿಳಿಸಿದೆ.

ಖ್ಯಾತ ಗಾಯಕಿ ಬಿ.ಜಯಶ್ರೀ ಅವರಿಂದ ಕನ್ನಡ ರಂಗಭೂಮಿ ಸಂಗೀತ ಸಂಜೆ ಕಾರ್ಯಕ್ರಮ ಇದೇ 29ರಂದು ಸಂಜೆ 6.30ರಿಂದ 8 ಗಂಟೆ ತನಕ ಬಿಐಸಿಯಲ್ಲಿ ನಡೆಯಲಿದೆ. ಲೇಖಕಿ ಪ್ರೀತಿ ನಾಗರಾಜ್, ನಟ ಲೋಕೇಶ್ ಆಚಾರ್, ನಟಿ ಪೂಜಾ ರಾವ್, ಸಂಗೀತಗಾರರಾದ ಜಿ.ವಿ. ಭಾರ್ಗವ್, ರೋಹಿಣಿ ರಘುನಂದನ್, ರಂಗ ನಿರ್ದೇಶಕ ಅರವಿಂದ ಕುಪ್ಲಿಕರ್, ಗಾಯಕಿ ದೀಪಾ ಅಗರ್‌ವಾಲ್, ಸಂಗೀತಗಾರ ಜಿ.ವಿವೇಕ್ ಭಾಗವಹಿಸಲಿದ್ದಾರೆ ಎಂದು ಬಿಐಸಿ ಮಾಹಿತಿ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.