ADVERTISEMENT

‘ವಿವಿಧತೆಯಿಂದ ಗಟ್ಟಿಯಾದ ಭಾರತ’

ಬಿ.ಕೆ.ಮೃತ್ಯುಂಜಯ ಅಭಿನಂದನಾ ಸಮಾರಂಭ; ಕನ್ನಡಿಗನ ಸಾಧನೆಗೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 0:00 IST
Last Updated 9 ಜನವರಿ 2026, 0:00 IST
ಅಭಿನಂದನಾ ಕಾರ್ಯಕ್ರಮದಲ್ಲಿ ಬಿ.ಕೆ. ಮೃತ್ಯುಂಜಯ ಅವರಿಗೆ ಚಿನ್ನದ ಕೀರಿಟ ತೊಡಿಸಿ ಗೌರವಿಸಲಾಯಿತು. ಸಿದ್ದಲಿಂಗ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮತ್ತು ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ
ಅಭಿನಂದನಾ ಕಾರ್ಯಕ್ರಮದಲ್ಲಿ ಬಿ.ಕೆ. ಮೃತ್ಯುಂಜಯ ಅವರಿಗೆ ಚಿನ್ನದ ಕೀರಿಟ ತೊಡಿಸಿ ಗೌರವಿಸಲಾಯಿತು. ಸಿದ್ದಲಿಂಗ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮತ್ತು ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತವು ಸಂಸ್ಕೃತಿ, ರಾಜಪ್ರಭುತ್ವಕ್ಕೂ ಮಹತ್ವ ನೀಡಿದೆ. ವಿವಿಧತೆಯ ನಡುವೆಯೂ ದೇಶ ಗಟ್ಟಿಯಾಗಿ ಉಳಿದಿದೆ’ ಎಂದು ಕೇಂದ್ರದ ಕಾರ್ಮಿಕ, ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹೆಚ್ಚುವರಿ ಮಹಾ ಪ್ರಧಾನ ಕಾರ್ಯದರ್ಶಿ ರಾಜಯೋಗಿ ಬಿ.ಕೆ.ಮೃತ್ಯುಂಜಯ ಅವರ ಅಭಿನಂದನೆ ಸಮಾರಂಭದಲ್ಲಿ ‘ಸಮರ್ಪಣೆ’ ಅಭಿನಂದನಾ ಸಂಪುಟ ಜನಾರ್ಪಣೆಗೊಳಿಸಿ ಮಾತನಾಡಿದರು.

‘ಭಾರತಕ್ಕೆ ಆಧ್ಯಾತ್ಮಿಕವೇ ಆತ್ಮ. ಅಧ್ಯಾತ್ಮವಿಲ್ಲದ ಭಾರತವನ್ನು ಊಹಿಸಿಕೊಳ್ಳಲು ಆಗುವುದಿಲ್ಲ. ದೊಡ್ಡ ಧಾರ್ಮಿಕ ಪರಂಪರೆ ಭಾರತದಲ್ಲಿದೆ. ಆಸ್ತಿಕರು, ನಾಸ್ತಿಕರನ್ನು ಒಳಗೊಂಡಂತೆ ಭಾರತ ವೈವಿಧ್ಯದ ರೂಪದಂತಿದೆ. ನಾಗಾ ಸಾಧುಗಳು, ಜೈನರ ಸಹಿತ ವಿವಿಧ ಧಾರ್ಮಿಕ ಪರಂಪರೆಯವರು ಆಧ್ಯಾತ್ಮಿಕ ಶ್ರೀಮಂತಿಕೆಯ ಸೂಚಕದಂತೆ ಇದ್ದಾರೆ. ಇದು ನಮ್ಮೆಲ್ಲರ ಹಿರಿಮೆ’ ಎಂದು ಹೇಳಿದರು.

‘ಕನ್ನಡ ಕುವರರೇ ಆಗಿರುವ ಬಿ.ಕೆ.ಮೃತ್ಯುಂಜಯ ಅವರು ಮೌಂಟ್‌ ಅಬುದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಉನ್ನತ ಹುದ್ದೆಗೆ ಏರಿರುವುದು ನಮ್ಮೆಲ್ಲರಿಗೂ ಅಭಿಮಾನದ ಸಂಗತಿ. ಕೃಷಿ ಕುಟುಂಬದಲ್ಲಿ ಜನಿಸಿ ಶಿಕ್ಷಣ ಪಡೆದು 19ನೇ ವಯಸ್ಸಿನಲ್ಲಿಯೇ ಧಾರ್ಮಿಕತೆ ಕಡೆಗೆ ಆಕರ್ಷಿತರಾದವರು’ ಎಂದು ತಿಳಿಸಿದರು.

ADVERTISEMENT

ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ, ‘ಯಾವುದೇ ವ್ಯಕ್ತಿ ಶುದ್ದ ನಡೆ ನುಡಿ, ವ್ಯಕ್ತಿತ್ವವನ್ನು ಇಟ್ಟುಕೊಂಡಿದ್ದರೆ ಎಷ್ಟು ಎತ್ತರಕ್ಕಾದರೂ ಏರಬಲ್ಲರು ಎನ್ನುವುದಕ್ಕೆ ಬಿ.ಕೆ.ಮೃತ್ಯುಂಜಯ ಅವರೇ ಸಾಕ್ಷಿ. ಯಾವುದೇ ವ್ಯಕ್ತಿ ಮಾತನಾಡುವುದಕ್ಕಿಂತ ಆತನ ಸಾಧನೆಗಳೇ ಮಾತನಾಡಬೇಕು’ ಎಂದು ಹೇಳಿದರು.

ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದಸ್ವಾಮೀಜಿ, ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮೋಟಗಿ ಮಠದ ಪ್ರಭುಚೆನ್ನಬಸವ ಸ್ವಾಮೀಜಿ, ರಾಜಯೋಗಿನಿ ಬಿ.ಕೆ.ಜಯಂತಿ, ಕರ್ನಾಟಕ ವೀರಶೈವ ವಿದ್ಯಾಭಿವೃದ್ದಿ ಸಂಸ್ಥೆ ಮತ್ತು ವೀರಶೈವ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಬಿ.ಎಸ್‌. ಪರಮಶಿವಯ್ಯ, ಸಮರ್ಪಣೆ ಅಭಿನಂದನ ಸಂಪುಟದ ಪ್ರಧಾನ ಸಂಪಾದಕ ಎಂ.ಜಿ.ನಾಗರಾಜ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.