ADVERTISEMENT

ತಿನಿಸು ವ್ಯವಹಾರದಲ್ಲಿ ನಷ್ಟ: ಗಾಂಜಾ ಮಾರುತ್ತಿದ್ದವರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 20:44 IST
Last Updated 27 ಫೆಬ್ರುವರಿ 2022, 20:44 IST
ರಾಜಗೋಪಾಲನಗರ ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ಗಾಂಜಾ
ರಾಜಗೋಪಾಲನಗರ ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ಗಾಂಜಾ   

ಬೆಂಗಳೂರು: ನೆರೆಯ ಆಂಧ್ರಪ್ರದೇಶದಿಂದ ಗಾಂಜಾ ತಂದು ನಗರದಲ್ಲಿ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ರಾಜಗೋಪಾಲನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

‘ತಮಿಳುನಾಡಿನ ಪ್ರಕಾಶ್, ಸುಂದರ್ ಪಾಂಡೆ ಬಂಧಿತರು. ಅವರಿಂದ 21 ಕೆ.ಜಿ 180 ಗ್ರಾಂ ಗಾಂಜಾ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸ್ನೇಹಿತರಾಗಿದ್ದ ಇವರು ಕೆಲಸ ಹುಡುಕಿಕೊಂಡು ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಚಕ್ಕುಲಿ, ನಿಪ್ಪಟ್ಟು ಹಾಗೂ ಇತರೆ ತಿನಿಸುಗಳನ್ನು ತಯಾರಿಸಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಕೋವಿಡ್‌ನಿಂದ ವ್ಯಾಪಾರದಲ್ಲಿ ನಷ್ಟವಾಗಿತ್ತು. ಬಳಿಕ ಗಾಂಜಾ ಮಾರಾಟಕ್ಕೆ ಇಳಿದಿದ್ದರು. ಚಿಕ್ಕ ಪೊಟ್ಟಣಗಳಲ್ಲಿ ತುಂಬಿ ತಿನಿಸು ರೀತಿ ಮಾರುತ್ತಿದ್ದು, ಹೆಚ್ಚು ಹಣ ಸಂಪಾದಿಸುತ್ತಿದ್ದರು’ ಎಂದೂ ಪೊಲೀಸರು ಹೇಳಿದರು.

ADVERTISEMENT

ಪೀಣ್ಯದಲ್ಲಿ ಸಿಕ್ಕಿಬಿದ್ದರು: ‘ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಕಂಪನಿಗಳ ಉದ್ಯೋಗಿಗಳು ಹಾಗೂ ಕೆಲ ಕಾರ್ಮಿಕರು ಗ್ರಾಹಕರಾಗಿದ್ದು, ತಮ್ಮದೇ ಜಾಲದ ಮೂಲಕ ತಲುಪಿಸುತ್ತಿದ್ದರು’ ಎಂದು ವಿವರಿಸಿದರು.

‘ಫೆ.16ರಂದು ಪೀಣ್ಯ 4ನೇ ಹಂತದ ಸ್ಥಳವೊಂದರಲ್ಲಿ ಗಾಂಜಾ ಮಾರುತ್ತಿದ್ದರು. ಮಾಹಿತಿ ಬರುತ್ತಿದ್ದಂತೆ ಪಿಎಸ್‌ಐ ನೇತೃತ್ವದ ತಂಡ ದಾಳಿ ಮಾಡಿಅವರಿಬ್ಬರನ್ನು ಬಂಧಿಸಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.