
ಬೆಂಗಳೂರು: ‘ನವ ಭಾರತದ ಭವಿಷ್ಯ ಯುವ ಜನತೆಯ ಕೈನಲ್ಲಿದ್ದು, ಪರಿಶ್ರಮವೇ ಯಶಸ್ಸಿನ ಕೀಲಿಯಾಗಿದೆ’ ಎಂದು ಲೈಟ್ ಕ್ಯಾಸ್ಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕಿ ಸರಸ್ವತಿ ರಾಮಚಂದ್ರ ಹೇಳಿದರು.
ಬಿಎನ್ಎಂಐಟಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
‘ಪದವಿ ಪಡೆದ ವಿದ್ಯಾರ್ಥಿಗಳಿಗೆ ಇಂದು ಸಂಭ್ರಮದ ದಿನವಾಗಿದೆ. ಆದರೆ, ನಾಳೆಯಿಂದ ನಿಮ್ಮ ಜವಾಬ್ದಾರಿ ಆರಂಭವಾಗುತ್ತದೆ. ಸ್ಪರ್ಧಾತ್ಮಕ ಜಗತ್ತಿಗೆ ನೀವು ಕಾಲು ಇಡುತ್ತಿದ್ದೀರಿ, ಹೊಸ ತಂತ್ರಜ್ಞಾನ ಮತ್ತು ಅನ್ವೇಷಣೆಗಳ ಕಡೆ ಹೆಚ್ಚಿನ ಗಮನ ನೀಡಿ’ ಎಂದು ಸಲಹೆ ಹೇಳಿದರು.
‘ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು. ಜತೆಗೆ ಅವುಗಳನ್ನು ಸಕಾರಗೊಳಿಸಲು ಶ್ರದ್ಧೆ ಮತ್ತು ಕಠಿಣ ಪರಿಶ್ರಮ ಹಾಕಬೇಕು’ ಎಂದರು.
ಎಂಬಿಎ ವಿಭಾಗದಲ್ಲಿ 10 ಚಿನ್ನದ ಪದಕಗಳನ್ನು ನೀಡಲಾಯಿತು. ಎಂಟೆಕ್ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದುಕೊಂಡರು.
‘ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ. ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿ. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತೆ ಎತ್ತರಕ್ಕೆ ಬೆಳೆಯಬೇಕು’ ಎಂದು ಬಿಎನ್ಎಂ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾರಾಯಣ ರಾವ್ ಆರ್. ಮಾನೆ ಹೇಳಿದರು.
ಬಿಎನ್ಎಂಐಟಿ ಜಂಟಿ ಕಾರ್ಯದರ್ಶಿ ಅಶೋಕ್ ಆರ್. ಮಾನೆ, ಕಾಲೇಜಿನ ಹೆಚ್ಚುವರಿ ನಿರ್ದೇಶಕ ಡಾ. ಎಸ್.ವೈ. ಕುಲಕರ್ಣಿ, ನಿರ್ದೇಶಕ ಪ್ರೊ.ಟಿ.ಜೆ ರಾಮಮೂರ್ತಿ, ಟ್ರಸ್ಟಿ ಈಶ್ವರ್ ಎನ್. ಮಾನೆ, ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎನ್.ಕೃಷ್ಣಮೂರ್ತಿ, ಡಾ.ಕೆ. ವೆಂಕಟೇಶ್, ಡಾ. ಜಿ.ಎನ್. ಕೇಶವ ಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.