ADVERTISEMENT

‘ಬೋಗಸ್‌ ಸಂಸ್ಕೃತಿ ಪೋಷಣೆ ಅಪಾಯಕಾರಿ’

‘ಚಳವಳಿಯ ಹಾಡುಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ. ಕೆ. ಶರೀಫಾ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 20:08 IST
Last Updated 18 ಅಕ್ಟೋಬರ್ 2021, 20:08 IST

ಬೆಂಗಳೂರು: ‘ಬೋಗಸ್‌ ಸಂಸ್ಕೃತಿಗಳನ್ನು ಬೆಳೆಸುತ್ತಿರುವವರೇ ಇಂದು ಪ್ರಜಾಪ್ರಭುತ್ವದ ರಕ್ಷಕರಾಗುತ್ತಿರು
ವುದು ದುರಂತ’ ಎಂದು ಸಾಹಿತಿ ಡಾ. ಕೆ. ಶರೀಫಾ ಅಭಿಪ್ರಾಯಪಟ್ಟರು.

ಜನ ಪ್ರಕಾಶನ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ’ಚಳವಳಿಯ ಹಾಡುಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಭುತ್ವದ ವಿರುದ್ಧ ಕವಿತೆ ಬರೆದರೆ ಎಫ್‌ಐಆರ್‌ ದಾಖಲಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈಗಾಗಲೇ ಅನೇಕ ಹೋರಾಟಗಾರರು ಜೈಲು ಶಿಕ್ಷೆ ಸಹ ಅನುಭವಿಸಿದ ಉದಾಹರಣೆಗಳಿವೆ. ಜತೆಗೆ, ಶಸ್ತ್ರಾಸ್ತ್ರಗಳನ್ನು ನಿಷೇಧಿಸಿರುವ ದೇಶದಲ್ಲೂ ತ್ರಿಶೂಲ ದೀಕ್ಷೆ ನಡೆಯುತ್ತಿರುವ ಕಾಲಘಟ್ಟ ಇದಾಗಿದೆ’ ಎಂದರು.

ADVERTISEMENT

‘ಬರಗೂರು ರಾಮಚಂದ್ರಪ್ಪ ಅವರು ಕಟ್ಟಿದ ಚಳವಳಿಗಳು ಅದ್ಭುತ ಪರಿಣಾಮ ಬೀರಿವೆ. ಬಂಡಾಯ ಚಳವಳಿಯ ಸಂದರ್ಭದಲ್ಲಿ ಪಟ್ಟಭದ್ರರ ಭಯವೂ ಕಾಡಿತ್ತು. ವಿರೋಧಗಳು ಸಹ ವ್ಯಕ್ತವಾಗಿದ್ದವು. ಬಂಡಾಯ ಚಳವಳಿಯ ಬೆನ್ನಲುಬಾಗಿದ್ದ ಬರಗೂರು ಅವರು ನಮ್ಮೆಲ್ಲರನ್ನೂ ತಾಯ್ತನದಿಂದ ಪೋಷಿಸಿದ್ದರು. ನಿಷ್ಠುರವಾಗಿ ಸಿಡಿದೆಳುವ ಪ್ರವೃತ್ತಿ ಹಾಗೂ ವೈಚಾರಿಕತೆ ಆಳ ಮತ್ತು ಸ್ಪಷ್ಟತೆ ಅವರ ವ್ಯಕ್ತಿತ್ವ
ದಲ್ಲಿದೆ’ ಎಂದು ವಿವರಿಸಿದರು.

‘ನಡೆ, ನುಡಿಯಲ್ಲಿ ಸೈದ್ಧಾಂತಿಕ ಬದ್ಧತೆಗಳು ಇಂದಿಗೂ ಬರಗೂರು ರಾಮಚಂದ್ರಪ್ಪ ಅವರಲ್ಲಿ ಉಳಿದು
ಕೊಂಡಿವೆ. ಬಂಡಾಯ ಸಾಹಿತಿಗೆ ಸಾಮಾಜಿಕ ಜವಾಬ್ದಾರಿ ಮತ್ತು ರಾಜಕೀಯ ಸ್ಪಷ್ಟತೆ ಇರಬೇಕು ಎನ್ನುವುದನ್ನು ಅವರು ಸದಾ ಹೇಳುತ್ತಾರೆ’ ಎಂದು ಹೇಳಿದರು.

ಬರಗೂರು ರಾಮಚಂದ್ರಪ್ಪ ಅವರು ಮಾತನಾಡಿ, ‘ಚಳವಳಿ ಪ್ರಜ್ಞೆಯನ್ನು ಜೀವಂತವಾಗಿಡು
ವುದು ಇಂದು ಹೆಚ್ಚು ಅಗತ್ಯವಿದೆ. ಕನ್ನಡ ಸಾಹಿತ್ಯವೇ ನನಗೆ ಚಳವಳಿ ಪ್ರಜ್ಞೆ ಮೂಡಿಸಿದೆ. ಈ ಚಳವಳಿ ಪ್ರಜ್ಞೆಯನ್ನು ಉಳಿಸಿ ಬೆಳೆಸಬೇಕು’ ಎಂದು ಸಲಹೆ ನೀಡಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ವಿಮರ್ಶಕ ಡಾ.ಎಚ್‌. ದಂಡಪ್ಪ, ಬರಗೂರು ರಾಮಚಂದ್ರಪ್ಪ ಅವರ ವ್ಯಕ್ತಿತ್ವ, ಹೋರಾಟದ ದಿನಗಳು, ಶಿಷ್ಯರಿಗೆ ಮಾರ್ಗದರ್ಶನ ನೀಡಿದ ವೃತ್ತಿ ಜೀವನದ ದಿನಗಳನ್ನು ನೆನಪಿಸಿಕೊಂಡರು.

‘ಚಳವಳಿಯ ಹಾಡುಗಳು’ ಕೃತಿಯಲ್ಲಿ ಜನಸಾಮಾನ್ಯರ ಸಾಂಸ್ಕೃತಿಕ ದರ್ಶನವಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.