ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದ ವಿಚಾರಣೆ ನಡೆಸುತ್ತಿರುವ ನಗರದ ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆಯೊಡ್ಡಿ ಪತ್ರ ಬರೆದಿದ್ದರು ಎನ್ನಲಾದ ಅನುಮಾನದ ಮೇರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.
‘ತುಮಕೂರಿನ ರಾಜಶೇಖರ್, ವೇದಾಂತ್, ಶಿವಪ್ರಕಾಶ್, ರಮೇಶ್ ಎಂಬುವರನ್ನು ಕಸ್ಟಡಿಗೆ ಪಡೆಯಲಾಗಿದೆ. ಅವರನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ನಾಲ್ವರು ಸಂಬಂಧಿಕರು. ಆಸ್ತಿ ಹಂಚಿಕೆ ಸಂಬಂಧ ಮನಸ್ತಾಪವಿತ್ತು. ಅದೇ ಕಾರಣಕ್ಕೆ ರಾಜಶೇಖರ್ ಎಂಬಾತ, ಶಿವಪ್ರಕಾಶ್, ವೇದಾಂತ್ ಹಾಗೂ ರಮೇಶ್ ಹೆಸರಿನಲ್ಲಿ ಪತ್ರ ಬರೆದಿದ್ದ. ಅವರನ್ನು ಜೈಲಿಗೆ ಕಳುಹಿಸುವುದು ಅವನ ಉದ್ದೇಶವಾಗಿತ್ತು ಎಂದು ಗೊತ್ತಾಗಿದೆ. ಆದರೂ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಬೇಕು. ಅವಾಗಲೇ ನಿಜಾಂಶ ತಿಳಿಯಲಿದೆ’ ಎಂದೂ ಅವರು ಮಾಹಿತಿ ನೀಡಿರು.
ಕಾರಿನ ಎಂಜಿನ್ನಲ್ಲಿ ಬಾಂಬ್: ‘ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಹಾಗೂ ಡ್ರಗ್ಸ್ ಪ್ರಕರಣದ ಎಲ್ಲ ಆರೋಪಿಗಳಿಗೆ ಜಾಮೀನು ನೀಡಬೇಕು. ನಿಮಗೆ ಏನು ಬೇಕು ಕೇಳಿ, ಎಲ್ಲ ಕೊಡುತ್ತೇವೆ. ಅದನ್ನು ಬಿಟ್ಟು ಜಾಮೀನು ನಿರಾಕರಿಸಿದರೆ, ನಿಮ್ಮ ಕಾರಿನ ಎಂಜಿನ್ಗೆ ಬಾಂಬ್ ಇಟ್ಟು ಸ್ಪೋಟಿಸುತ್ತೇವೆ' ಎಂದು ಬೆದರಿಕೆ ಪತ್ರದಲ್ಲಿ ಬರೆಯಲಾಗಿತ್ತು. 'ನಗರ ಪೊಲೀಸ್ ಕಮಿಷನರ್ ಹಾಗೂ ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲಗೂ ಪತ್ರ ಕಳುಹಿಸಲಾಗಿದೆ. ಇದು, ಮಹಮ್ಮದ್ ಜೈಷಿ ಸಂಘಟನೆ ಎಚ್ಚರಿಕೆ’ ಎಂಬುದು ಪತ್ರದಲ್ಲಿ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.