ಬೆಂಗಳೂರು:ಮಾಲಿನ್ಯ ತಡೆಗಟ್ಟಲು ಪ್ರತಿ ಘಟಕವೂ ಅಗತ್ಯ ಕ್ರಮ ಅನುಸರಿಸಬೇಕು ಎಂದುಬೊಮ್ಮಸಂದ್ರ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೈಗಾರಿಕೆಗಳ ತ್ಯಾಜ್ಯದಿಂದ ಗಾಳಿ ಮತ್ತು ನೀರು ಕಲುಷಿತವಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಾಲಿನ್ಯ ತಡೆಗಟ್ಟಲು ಬೇಕಾದ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು ಶುಕ್ರವಾರ ಉದ್ಯಮಿಗಳ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ದೇವಿಶೆಟ್ಟಿ, ‘ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಹೃದ್ರೋಗಿಗಳ ಸಂಖ್ಯೆ ದಿನಂಪ್ರತಿ ಏರಿಕೆಯಾಗುತ್ತಿದೆ. ಯುವಕರು ಮತ್ತು ಮಕ್ಕಳಿಗೂ ಇದು ಹರಡುತ್ತಿರುವುದು ಆತಂಕ ಮೂಡಿಸಿದೆ. ಮಾನಸಿಕ ಒತ್ತಡ, ದುಶ್ಚಟ, ಆಹಾರ ಕ್ರಮದಲ್ಲಿ ಅಸಮತೋಲನ ಹಾಗೂ ಕಲುಷಿತ ವಾತಾವರಣದಿಂದಾಗಿ ಹೃದಯ ಸಂಬಂಧಿ ರೋಗಗಳು ಉಲ್ಬಣವಾಗುತ್ತಿವೆ ಎಂದು ಅಧ್ಯಯನಗಳು ಹೇಳುತ್ತಿವೆ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ’ ಎಂದರು.
ಕಂದಾಯ ಇಲಾಖೆ ಸಹಾಯಕ ಆಯುಕ್ತ ಹರೀಶ್ ನಾಯಕ್ ಮಾತನಾಡಿ, ‘ಬಹಳಷ್ಟು ಕೈಗಾರಿಕೆಗಳು ಎಸ್ಟಿಪಿ ಘಟಕಗಳನ್ನು ಹೊಂದಿಲ್ಲ. ಇದರಿಂದ ತ್ಯಾಜ್ಯ ನೀರು ಕೆರೆಗಳನ್ನು ಸೇರುತ್ತಿದೆ. ಕೈಗಾರಿಕೆಗಳು ತಮ್ಮ ಸಿಎಸ್ಆರ್ ನಿಧಿಯನ್ನು ಕೆರೆಗಳ ಅಭಿವೃದ್ಧಿಗೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಬಳಕೆ ಮಾಡಬೇಕು’ ಎಂದರು.
ಡಿವೈಎಸ್ಪಿ ಜಗದೀಶ್, ಸಂಘದ ಅಧ್ಯಕ್ಷ ಪ್ರಸಾದ್, ಪ್ರಧಾನ ಕಾರ್ಯದರ್ಶಿ ನರೇಂದ್ರ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.