ಹಂಪಿ
ಬೆಂಗಳೂರು: ‘ವಿಜಯನಗರ ಸಾಮ್ರಾಜ್ಯದ ಅರಸರು ಧರ್ಮಾತೀತ ಆಡಳಿತ ನಡೆಸುವ ಮೂಲಕ ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಆ ವಾಸ್ತುಶಿಲ್ಪವನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಹೊಣೆಗಾರಿಕೆ ನಮ್ಮ ಮೇಲಿದೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಘ್ ಹೇಳಿದರು.
ಭಾರತೀಯ ವಿದ್ಯಾಭವನ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ದೇವರಾಯನ ವಂಶಸ್ಥ ತಿರುಮಲ ವೆಂಕಟ ದೇವರಾಯ ಅವರು ಸಂಪಾದಿಸಿರುವ ‘ಇನ್ ದಿ ಎಂಪೈರ್ ಆಫ್ ದಿ ಗಾಡ್ ಕಿಂಗ್’ ಪುಸ್ತಕವನ್ನು ಜನಾರ್ಪಣೆ ಮಾಡಿ, ಮಾತನಾಡಿದರು.
‘ವಿಜಯನಗರ ಸಾಮ್ರಾಜ್ಯವನ್ನು ಆಳಿದವರಲ್ಲಿ ಶ್ರೀಕೃಷ್ಣ ದೇವರಾಯ ದೂರದೃಷ್ಟಿ ಹೊಂದಿದ್ದರು. ಕನ್ನಡ, ತೆಲುಗು, ಸಂಸ್ಕೃತ ಭಾಷೆಯ ಕವಿಗಳಿಗೆ ಆಶ್ರಯ ನೀಡಿದ್ದ ಅವರು, ಸಾಹಿತ್ಯದ ಪೋಷಣೆ ಜತೆಗೆ ವಿವಿಧ ದೇವಾಲಯಗಳನ್ನು ನಿರ್ಮಿಸುವ ಮೂಲಕ ಸಾಮ್ರಾಜ್ಯದ ಚರಿತ್ರೆಯನ್ನು ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ, ಈಗ ಪ್ರವಾಸಿ ತಾಣ ಮಾತ್ರವಾಗಿರದೆ ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸೇರಿದೆ’ ಎಂದರು.
‘ಶ್ರೀಕೃಷ್ಣ ದೇವರಾಯ ಅರಸ ಮಾತ್ರವಾಗಿರದೆ, ಸ್ವತಃ ಕವಿಯಾಗಿದ್ದರು. ಅವರ ಆಡಳಿತದಲ್ಲಿ ಹಿಂದೂ-ಮುಸ್ಲಿಮರಲ್ಲಿ ಪರಸ್ಪರ ಸಾಮರಸ್ಯವಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಹಂಪಿಯಲ್ಲಿ ನಿರ್ಮಿಸಿರುವ ದೇವಾಲಯಗಳು ಹಾಗೂ ಗೋಪುರಗಳು ಇಂಡೋ–ಸಾರ್ಸೆನಿಕ್ ವಾಸ್ತುಶಿಲ್ಪ ಶೈಲಿಯನ್ನು ಒಳಗೊಂಡಿವೆ’ ಎಂದು ಹೇಳಿದರು.
ಶ್ರೀಕೃಷ್ಣ ದೇವರಾಯರನ 19ನೇ ವಂಶಸ್ಥ ಶ್ರೀಕೃಷ್ಣ ದೇವರಾಯ ಅವರು ಪುಸ್ತಕದ ಬಗ್ಗೆ ಮಾತನಾಡಿದರು.
ಎಡಿಜಿಪಿ ಎಸ್. ಮುರುಗನ್ ಮಾತನಾಡಿದರು. ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಜಿ.ರಾಘವನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.