ಬೆಂಗಳೂರು: ‘ರಾಜ್ಯದಲ್ಲಿ ಅನ್ಯ ಭಾಷಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ,ಗಡಿನಾಡುಗಳಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ’ ಎಂದು ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ವಿ.ಸೋಮಣ್ಣ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮತ್ತು ಸಂಸ್ಕೃತಿಯ ಹಿರಿಮೆ, ಗರಿಮೆ’ ಕೃತಿ ಹಾಗೂ ವಿ.ಸೋಮಣ್ಣ ಪ್ರತಿಷ್ಠಾನದ ಜಾಲತಾಣ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಲಸಿಗರನ್ನುಕನ್ನಡಿಗರನ್ನಾಗಿಸುವ ಬಗೆ ಹೇಗೆ ಎಂಬುದರ ಬಗ್ಗೆ ಚಿಂತಿಸಬೇಕಿದೆ. ನಾಡಿನಗಲ್ಲಿ ಗಲ್ಲಿಗಳಲ್ಲಿ ಕನ್ನಡವನ್ನು ಹುಡುಕುವ ಸ್ಥಿತಿ ಬಂದೊದಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕನ್ನಡದ ಅಸ್ಮಿತೆ ಕುರಿತು ಯೋಚಿಸುವ ಅಗತ್ಯವಿದೆ. ಕನ್ನಡ ಶಾಲೆ, ಕಾಲೇಜುಗಳಲ್ಲಿ ಕನ್ನಡ ಬಳಕೆ ಹೆಚ್ಚಾಗಬೇಕು. ಕನ್ನಡ ಓದುಗರು ಹೆಚ್ಚಾಗಬೇಕಿದೆ.ಮಕ್ಕಳ ಕೈಗೆ ಮೊಬೈಲ್ ನೀಡದೆ, ಕನ್ನಡದ ಪುಸ್ತಕ ನೀಡಿ. ಪ್ರತಿ ಮನೆಗಳಲ್ಲೂ ಕನ್ನಡ ಕಡ್ಡಾಯವಾಗಿ ಬಳಕೆಯಾಗಬೇಕು’ ಎಂದರು.
ಎಂ.ಚಿದಾನಂದಮೂರ್ತಿ ಮಾತನಾಡಿ, ‘ನಿನ್ನೆಯನ್ನು ಮರೆತವನು ಇಂದು ಬಾಳಲಾರ, ನಾಳೆ ಬೆಳೆಯಲಾರ. ಕನ್ನಡ ಸಂಸ್ಕೃತಿಯ ಇತಿಹಾಸವನ್ನು ಮರೆಯಬಾರದು’ ಎಂದು ಹೇಳಿದರು.
‘ರಾಜ್ಯದ ನೂರು ತಾಲ್ಲೂಕುಗಳಲ್ಲಿ ಬರ ತಲೆದೋರಿದೆ. ಬರ ಪರಿಹಾರಕ್ಕೆ ಮುಂದಾಗುವ ಅಗತ್ಯವಿದೆ. ಪ್ರವಾಹ ಪೀಡಿತ ಕೊಡಗು, ಕೇರಳ ಸಂತ್ರಸ್ತರ ನೋವಿಗೆ ದನಿಯಾಗಬೇಕಿದೆ. ನಾಡಿನ ಪ್ರತಿಭಾವಂತರನ್ನು ಗುರುತಿಸಿ ಸಾಧ್ಯವಾದಷ್ಟು ಸಹಾಯಹಸ್ತ ಚಾಚುವ ನಿಟ್ಟಿನಲ್ಲಿ ಪ್ರತಿಷ್ಠಾನ ಕೆಲಸ ಮಾಡಲಿದೆ’ ಎಂದು ಶಾಸಕ ವಿ.ಸೋಮಣ್ಣ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.