ಬೆಂಗಳೂರು: ‘ನಮ್ಮ ವಿಚಾರಧಾರೆ, ತಾತ್ವಿಕತೆ ಹಾಗೂ ಸಿದ್ಧಾಂತಗಳನ್ನು ಮಕ್ಕಳ ಹೆಸರಿನ ಮೂಲಕ ಹೇರಲು ಪ್ರಯತ್ನಿಸುತ್ತಿದ್ದೇವೆಯೋ ಅನಿಸುತ್ತಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಜೀರುಂಡೆ ಪುಸ್ತಕ ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಎಸ್.ಗಂಗಾಧರಯ್ಯ ಅವರ ‘ಗಂಗಾಪಾಣಿ’ ಕಾದಂಬರಿ ಬಿಡುಗಡೆ ಮಾಡಿ, ಮಾತನಾಡಿದರು.
‘ತಾವು ನಂಬಿದ, ಪ್ರಭಾವಿತವಾದ ವಿಚಾರಧಾರೆ ಆಧರಿಸಿ ಗಾಂಧಿ ಸೇರಿ ವಿವಿಧ ಹೆಸರನ್ನು ಇಟ್ಟ ಉದಾಹರಣೆಗಳು ಸಿಗುತ್ತವೆ. ಪರಿಚಯಸ್ಥರೊಬ್ಬರು ಮೊದಲಿನ ಮಗನಿಗೆ ‘ರಾಷ್ಟ್ರಪತಿ’ಯೆಂದು, ಎರಡನೆ ಮಗನಿಗೆ ‘ಉಪ ರಾಷ್ಟ್ರಪತಿ’ಯೆಂದು ಹೆಸರಿಟ್ಟರು. ತಾವೇನು ಕಡಿಮೆಯೆಂದು ಈ ರೀತಿ ಹೆಸರಿಟ್ಟಿದ್ದರು. ತಮಿಳುನಾಡಿನಲ್ಲಿ ತೇಲಂ ಮೋಹನ್ ಎನ್ನುವವರು ತಮ್ಮ ಮೂವರು ಮಕ್ಕಳಿಗೆ ‘ಕಮ್ಯೂನಿಸಂ’, ‘ಲೆನಿನಿಸಂ’, ‘ಸೋಶಿಯಲಿಸಂ’ ಎಂಬ ಹೆಸರಿಟ್ಟಿದ್ದರು. ಈ ರೀತಿ ಪ್ರಯೋಗಗಳು ನಡೆಯುತ್ತಿರುತ್ತವೆ’ ಎಂದು ಹೇಳಿದರು.
ಪುಸ್ತಕದ ಬಗ್ಗೆ ಮಾತನಾಡಿದ ಪ್ರಾಧ್ಯಾಪಕಿ ಬಿ.ಯು.ಸುಮಾ, ‘ಕಾದಂಬರಿ ಐದು ತಲೆಮಾರಿನ ಕಥೆ ಹೇಳುತ್ತದೆ. ಕಾಲ ಬದಲಾದಂತೆ ಬದುಕು ಪಡೆದುಕೊಳ್ಳುವ ತಿರುವುಗಳನ್ನು ತಿಳಿಸುತ್ತದೆ’ ಎಂದು ತಿಳಿಸಿದರು.
ಸುಧಾ ವಾರಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಚ.ಹ.ರಘುನಾಥ, ಲೇಖಕ ಎಸ್.ಗಂಗಾಧರಯ್ಯ, ಧನಂಜಯ್ ಎನ್. ಅವರು ಉಪಸ್ಥಿತರಿದ್ದರು.
ಪುಸ್ತಕ ಪರಿಚಯ
ಪುಸ್ತಕ: ‘ಗಂಗಾಪಾಣಿ’
ಲೇಖಕ: ಎಸ್. ಗಂಗಾಧರಯ್ಯ
ಪುಟಗಳು: 248
ಬೆಲೆ: ₹280
ಪ್ರಕಾಶನ: ಜೀರುಂಡೆ ಪ್ರಕಾಶನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.