ಬೆಂಗಳೂರು: ‘ಕನ್ನಡದಲ್ಲಿ ವರ್ಷಕ್ಕೆ 6 ಸಾವಿರಕ್ಕೂ ಅಧಿಕ ಪುಸ್ತಕಗಳು ಬಿಡುಗಡೆ ಆಗುತ್ತಿವೆ. ಆದರೆ, ಎಲ್ಲ ಪುಸ್ತಕಗಳು ನಿರೀಕ್ಷಿತ ಮಟ್ಟದಲ್ಲಿ ಓದುಗರನ್ನು ತಲುಪುತ್ತಿಲ್ಲ’ ಎಂದು ಲೇಖಕ ಸಂತೋಷ ಕುಮಾರ ಮೆಹೆಂದಳೆ ಅವರು ಬೇಸರವ್ಯಕ್ತಪಡಿಸಿದರು.
ವಿಕ್ರಂ ಪ್ರಕಾಶನ ಭಾನುವಾರ ಆಯೋಜಿಸಿದ್ದ ಪಂಚ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ‘ಪುಸ್ತಕ ಓದುಗರ ಸಂಖ್ಯೆ ಕುಗ್ಗಲು ಸಾಮಾಜಿಕ ಜಾಲತಾಣವೂ ಕಾರಣ. ಪುಸ್ತಕ ಕೊಳ್ಳುವಿಕೆ ಜನರ ಕಡೆಯ ಆದ್ಯತೆ ಆಗಿರುತ್ತದೆ. ಪ್ರಕಾಶಕರು ಉತ್ತಮಪುಸ್ತಕಗಳನ್ನು ಓದುಗ ವರ್ಗಕ್ಕೆ ನೀಡಬೇಕು. ಸಾಹಿತ್ಯಕ್ಕೆ ಅದರದೆ ಆದ ಮೌಲ್ಯವಿದೆ. ಅದನ್ನು ಕಡಿಮೆ ಮಾಡಬಾರದು. ನಾನು ಬರೆದಪುಸ್ತಕ ಓದುಗರಿಗೆ ಇಷ್ಟವಾಗದಿದ್ದರೆ ಅವರಿಗೆ ಪುಸ್ತಕದ ಹಣ ಮರಳಿಸುವ ಸಂಕಲ್ಪ ಮಾಡಿದ್ದೇನೆ’ ಎಂದು ಹೇಳಿದರು.
ನಿವೃತ್ತ ಪೊಲೀಸ್ ಅಧಿಕಾರಿ ಡಿ.ವಿ. ಗುರುಪ್ರಸಾದ್, ‘ಪುಸ್ತಕ ಜಾತ್ರೆ ನವೆಂಬರ್ ತಿಂಗಳಿಗೆ ಸೀಮಿತ ಆಗಬಾರದು. ವರ್ಷದ ಎಲ್ಲ ದಿನ ಕನ್ನಡ ಜಾತ್ರೆ ನಡೆಯಬೇಕು’ ಎಂದು ಹೇಳಿದರು.
ಲೇಖಕ ನಾ.ಸೋಮೇಶ್ವರ, ‘ಸಂವಹನ ಸರಿಯಾದ ರೀತಿಯಲ್ಲಿ ನಡೆಯದಿದ್ದರೆ ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆಗಳು ಇರುತ್ತವೆ. ಮಾತನಾಡುವ ಕಲೆಯನ್ನು ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಬೇಕು. ಈ ಬಗ್ಗೆ ಪುಸ್ತಕ ಬರೆದಿದ್ದೇನೆ’ ಎಂದು ಹೇಳಿದರು.
ವಿಜಯ ಕರ್ನಾಟಕದ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ, ‘ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆ ಆಗುತ್ತಿದೆ. ಮೊಬೈಲ್ ಗೀಳು ಹೆಚ್ಚುತ್ತಿದೆ. ಪಾಲಕರು ಮಕ್ಕಳಿಗೆ ಮೊಬೈಲ್ಬದಲು ಪುಸ್ತಕ ನೀಡಬೇಕು’ ಎಂದರು. ಇದಕ್ಕೂ ಮೊದಲು ಟೀಮ್ ಯೋಧದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಪುಸ್ತಕ ಪರಿಚಯ
ಪುಸ್ತಕ: ಸಿಸ್ಟರ್ ಅಭಯಾ ಸಾವು ಕೊಲೆಯೋ ಆತ್ಮಹತ್ಯೆಯೋ?
ಲೇಖಕ: ಡಿ.ವಿ. ಗುರುಪ್ರಸಾದ್
ಪುಟಗಳು: 197
ಬೆಲೆ: ₹ 190
ಪುಸ್ತಕ: ನುಡಿದರೆ ಮುತ್ತಿನ ಹಾರದಂತಿರಬೇಕು!
ಲೇಖಕ: ನಾ. ಸೋಮೇಶ್ವರ
ಪುಟಗಳು: 196
ಬೆಲೆ: ₹ 200
ಪುಸ್ತಕ: ಅಲೆಮಾರಿಯ ಡೈರಿ
ಲೇಖಕ: ಸಂತೋಷ ಕುಮಾರ ಮೆಹೆಂದಳೆ
ಪುಟಗಳು: 191
ಬೆಲೆ: ₹ 200
ಪುಸ್ತಕ: ಯೋಧಂ ಶರಣಂ ಗಚ್ಛಾಮಿ
ಲೇಖಕ: ಟೆಎನ್ಎಸ್
ಪುಟಗಳು: 116
ಬೆಲೆ: ₹ 120
ಪುಸ್ತಕ: ಚಾಣಕ್ಯ ಅಮಿತ್ ಷಾ
ಲೇಖಕ: ಮಧು ಎಸ್. ಚಿನ್ನಸ್ವಾಮಿ
ಪುಟಗಳು: 454
ಬೆಲೆ: ₹ 460
lಐದು ಪುಸ್ತಕಗಳನ್ನೂ ವಿಕ್ರಂ ಪ್ರಕಾಶನ ಪ್ರಕಟಿಸಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.