ಬೆಂಗಳೂರು: ಬ್ರಾಹ್ಮಣ್ಯ ಎಂಬ ಒಳರಾಕ್ಷಸ ತಳ ಸಮುದಾಯಗಳ ಬೇರುಗಳನ್ನು ತುಂಡರಿಸುತ್ತಿದೆ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನೂರಕ್ಕೂ ಅಧಿಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿರುವ ಎಚ್.ಟಿ. ಪೋತೆ ಅವರಿಗೆ ಶನಿವಾರ ನಡೆದ ಅಭಿನಂದನಾ ಸಮಾರಂಭ, ವಿಚಾರ ಸಂಕಿರಣ, ಸಾಕ್ಷ್ಯಚಿತ್ರ ಪ್ರದರ್ಶನ, ಕಥಾ ಆಲಾಪ, ಐದು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳಿಂದ ಬ್ರಾಹ್ಮಣ್ಯ ಈ ಕೆಲಸ ಮಾಡಿಕೊಂಡು ಬಂದಿದ್ದು, ಇತ್ತೀಚೆಗೆ ಜಾಸ್ತಿಯಾಗಿದೆ. ಇದರ ವಿರುದ್ಧ ಬಹಿರಂಗವಾಗಿ ಮಾತನಾಡಬೇಕು. ವಿರೋಧಿಸಬೇಕು. ಆದರೆ, ಆಳುವ ವರ್ಗವೇ ಬ್ರಾಹ್ಮಣ್ಯಕ್ಕೆ ಹೆದರಿ ಕೂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶವನ್ನು ವೈಜ್ಞಾನಿಕವಾಗಿ ಮುನ್ನಡೆಸಬೇಕು ಎಂದು ನಮ್ಮ ಸಂವಿಧಾನವೇ ಹೇಳಿದ್ದರೂ ಮೌಢ್ಯಗಳೇ ಆಳುತ್ತಿವೆ. ದೇಶ ಹಿಂದುಳಿಯಲು ಜಾತಿ ವ್ಯವಸ್ಥೆ ಮತ್ತು ಮೌಢ್ಯವೇ ಕಾರಣ ಎಂದು ವಿಶ್ಲೇಷಿಸಿದರು.
ದಲಿತ ಸಾಹಿತ್ಯವನ್ನು ಮೇಲ್ವರ್ಗದವರು ಓದುವುದಿಲ್ಲ. ಶಾಲೆಗಳಲ್ಲಿ ಪಠ್ಯವಾಗಿಯೂ ಇಲ್ಲ. ತುಳಿತಕ್ಕೆ ಒಳಗಾದವರ ನೋವು ಹೊರಜಗತ್ತಿಗೆ ಗೊತ್ತಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಸಮಾಜದಲ್ಲಿರುವ ಅಸಮಾನತೆ, ಅಸ್ಪೃಶ್ಯತೆ ಬಗ್ಗೆ ಹಿಂದೆ ಆಕ್ರೋಶದಿಂದ ಬರೆಯುತ್ತಿದ್ದರು. ಆನಂತರದ ತಲೆಮಾರು ಆಕ್ರೋಶ ಬಿಟ್ಟು ತಳಸಮುದಾಯಗಳ ತಲ್ಲಣವನ್ನು ಕಟ್ಟಿಕೊಡುವ ಬರಹದಲ್ಲಿ ತೊಡಗಿಸಿಕೊಂಡಿತು. ಪೋತೆ ಅವರು ಈ ಸಾಲಿಗೆ ಸೇರಿದ ಬರಹಗಾರ. ಅಂಬೇಡ್ಕರ್ ಮೂಲಕ ಸಾಹಿತ್ಯವನ್ನು ನೋಡಿದವರು ಎಂದು ಅಭಿಪ್ರಾಯಪಟ್ಟರು.
ಶೇಷಾದ್ರಿಪುರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಗೂರು ಶ್ರೀರಾಮುಲು, ಸಪ್ನ ಬುಕ್ ಹೌಸ್ ಮಾಲೀಕ ನಿತಿನ್ ಷಾ, ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರ್ಜುನ ಗೊಳಸಂಗಿ ಉಪಸ್ಥಿತರಿದ್ದರು.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.