ಸಾಂದರ್ಭಿಕ ಚಿತ್ರ
ಬೆಂಗಳೂರು: ಬಿಡಿಎ ನಿವೇಶನ ಹಂಚಿಕೆ ಅಕ್ರಮ ಪ್ರಕರಣದ ಆರೋಪಿಯನ್ನು ರಕ್ಷಿಸಲು ಲಂಚ ಪಡೆದಿದ್ದ ಆರೋಪದ ಮೇಲೆ ಹೆಡ್ಕಾನ್ಸ್ಟೆಬಲ್ ಒಬ್ಬರನ್ನು ಅಮಾನತು ಮಾಡಲಾಗಿದೆ.
ಕೇಂದ್ರ ಆರ್ಥಿಕ ವಿಭಾಗ(ಸಿಸಿಬಿ)ದ ಹೆಡ್ಕಾನ್ಸ್ಟೆಬಲ್ ಯತೀಶ್ ಅಮಾನತುಗೊಂಡವರು.
‘ಈ ಪ್ರಕರಣದಲ್ಲಿ ₹55 ಲಕ್ಷದ ಹಣಕಾಸು ವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಸಮಗ್ರ ತನಿಖೆಗೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು ಆದೇಶಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಬಿಡಿಎ ನಿವೇಶನದ ಹಂಚಿಕೆ ಅಕ್ರಮ, ಭ್ರಷ್ಟಾಚಾರ ಸಂಬಂಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರ ತನಿಖೆಯನ್ನು 2022ರಿಂದ ಸಿಸಿಬಿ ನಡೆಸುತ್ತಿದೆ.
‘ಅಕ್ರಮದಲ್ಲಿ ಬಿಡಿಎ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಶಾಮೀಲಾಗಿರುವುದು ತನಿಖೆಯಿಂದ ಗೊತ್ತಾಗಿತ್ತು. ಮಹಿಳಾ ಅಧಿಕಾರಿಗೆ ಬಂಧನದ ಭೀತಿ ಎದುರಾಗಿತ್ತು. ತನಿಖೆಯ ಭಾಗವಾಗಿದ್ದ ಹೆಡ್ಕಾನ್ಸ್ಟೆಬಲ್ ಅವರು ಮಾಹಿತಿ ನೀಡುವ ಜತೆಗೆ ಆ ಅಧಿಕಾರಿಯನ್ನು ರಕ್ಷಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನ ಹಣವನ್ನೂ ಪಡೆದುಕೊಂಡಿದ್ದು ತನಿಖೆಯಿಂದ ಸಾಬೀತಾಗಿತ್ತು. ಅದನ್ನು ಆಧರಿಸಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.