ADVERTISEMENT

ಲಂಚ: ಇಬ್ಬರಿಗೆ ₹3 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 16:19 IST
Last Updated 13 ಮಾರ್ಚ್ 2024, 16:19 IST
   

ಬೆಂಗಳೂರು: ಲಂಚ ಪಡೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಅಪರಾಧಿಗಳಿಗೆ ಇಲ್ಲಿನ 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಹಾಗೂ ಸೆಷನ್ಸ್‌ ನ್ಯಾಯಾಲಯ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.

ಮನೆಗೆ ಹೊಸ ವಿದ್ಯುತ್ ಸಂಪರ್ಕ ಕಲ್ಪಿಸುವ ನಕ್ಷೆಗೆ ಅನುಮೋದನೆ ನೀಡಲು ಲಂಚ ಪಡೆದಿದ್ದ ಆರೋಪ ಸಾಬೀತಾಗಿದ್ದು ದಕ್ಷಿಣ ವಿಭಾಗದ ಉಪಮುಖ್ಯ ಎಲೆಕ್ಟ್ರಿಕಲ್‌ ಇನ್‌ಸ್ಪೆಕ್ಟರ್‌ ಕೆ.ವಿ.ಸದಾನಂದಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1.50 ಲಕ್ಷ ದಂಡ ವಿಧಿಸಿ, ನ್ಯಾಯಾಧೀಶರಾದ ಕೆ.ಎಂ.ರಾಧಾಕೃಷ್ಣ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.

‘ವಿನಾಯಕನಗರದಲ್ಲಿ ನಿರ್ಮಿಸಿದ್ದ ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ನಕ್ಷೆಗೆ ಅನುಮೋದನೆಗಾಗಿ ಆರ್‌.ಬಿ.ದಯಾನಂದ್‌ ಎಂಬುವರಿಂದ ₹25 ಸಾವಿರ ಲಂಚಕ್ಕಾಗಿ ಇನ್‌ಸ್ಪೆಕ್ಟರ್‌ ಬೇಡಿಕೆ ಇಟ್ಟಿದ್ದರು. ಅವರು ಎಸಿಬಿಗೆ ದೂರು ನೀಡಿದ್ದರು. 2016ರ ನವೆಂಬರ್‌ 30ರಂದು ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಪರಾಧಿಯನ್ನು ಬಂಧಿಸಿದ್ದರು. ತನಿಖೆ ನಡೆಸಿದ ಅಧಿಕಾರಿಗಳು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ADVERTISEMENT

ದಂಡ, ಶಿಕ್ಷೆ: ಖಾತಾ ಬದಲಾವಣೆ ಮಾಡಿಕೊಡುವುದಕ್ಕಾಗಿ ₹6 ಸಾವಿರ ಲಂಚ ಪಡೆದಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ ಸೊಣ್ಣಪ್ಪನಹಳ್ಳಿಯ ಗ್ರಾಮ ಪಂಚಾಯಿತಿ ಬಿಲ್‌ ಕಲೆಕ್ಟರ್‌ (ಗುತ್ತಿಗೆ ಆಧಾರಿತ ನೇಮಕ) ಎಚ್‌.ಮೂರ್ತಿಗೆ ಇದೇ ನ್ಯಾಯಾಲಯ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿ ಆದೇಶ ನೀಡಿದೆ. ದಂಡ ಪಾವತಿಸಲು ವಿಫಲವಾದಲ್ಲಿ, ಮತ್ತೆ ಎರಡು ತಿಂಗಳು ಜೈಲು ಶಿಕ್ಷೆ ವಿಧಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

2017ರ ನ.24ರಂದು ಎಚ್‌.ಮೂರ್ತಿ, ದೂರುದಾರರಿಂದ ಜಮೀನಿನ ಖಾತಾ ವರ್ಗಾವಣೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.