ADVERTISEMENT

ಬೆಂಗಳೂರು: ಲೆಕ್ಕ ಪರಿಶೋಧಕರ ಸಿಲುಕಿಸಲು ಪಿಸ್ತೂಲ್ ಮಾರಾಟ ಕಥೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2022, 20:07 IST
Last Updated 30 ಡಿಸೆಂಬರ್ 2022, 20:07 IST
   

ಬೆಂಗಳೂರು: ನಾಡ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳ ಮಾರಾಟ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮುಂಬೈನ ರಾಹುಲ್ ಹರಿಶಂಕರ್ ಭೌತಿಕ್, ಇರ್ಫಾನ್ ಹಾಗೂ ಚಿಂತನ್ ಬಂಧಿತರು. ಇವರಿಂದ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ಇರ್ಫಾನ್, ಮುಂಬೈನ ಲೆಕ್ಕ ಪರಿಶೋಧಕರೊಬ್ಬರ (ಸಿ.ಎ) ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಸಿ.ಎ ಹೆಸರು ಬಳಸಿ ನಂಬಿಕೆ ದ್ರೋಹವೆಸಗಿದ್ದ ಆರೋಪದಡಿ ಇರ್ಫಾನ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಜೈಲಿಗೆ ಹೋಗಿದ್ದ. ಇದರಿಂದಾಗಿ ಸಿ.ಎ ವಿರುದ್ಧ ಹರಿಹಾಯುತ್ತಿದ್ದ ಇರ್ಫಾನ್, ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ.’

ADVERTISEMENT

‘ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಸಿ.ಎ ಅವರನ್ನು ಸಿಲುಕಿಸಿ ಜೈಲಿಗೆ ಕಳುಹಿಸಲು ಸಂಚು ರೂಪಿಸಿದ್ದ ಆರೋಪಿ, ಇತರೆ ಆರೋಪಿಗಳ ಸಹಾಯ ಪಡೆದಿದ್ದ. ಆರೋಪಿ ರಾಹುಲ್, ಪಿಸ್ತೂಲ್ ಹಾಗೂ ಗುಂಡು ತೆಗೆದುಕೊಂಡು ಡಿ. 7ರಂದು ಕಬ್ಬನ್ ಪಾರ್ಕ್ ಉದ್ಯಾನಕ್ಕೆ ಬಂದಿದ್ದ. ಪಿಸ್ತೂಲ್ ಇರುವ ಬಗ್ಗೆ ಆರೋಪಿಗಳೇ ಠಾಣೆಗೆ ಮಾಹಿತಿ ನೀಡಿದ್ದರು. ದಾಳಿ ನಡೆಸಿದ್ದ ಸಿಬ್ಬಂದಿ, ಆರೋಪಿ ಸಮೇತ ಪಿಸ್ತೂಲ್ ಜಪ್ತಿ ಮಾಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿಗಳ ವಿಚಾರಣೆ ನಡೆಸಿದಾಗ, ಸಿ.ಎ ಅವರನ್ನು ಜೈಲಿಗೆ ಕಳುಹಿಸಲು ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.