ADVERTISEMENT

ಪೊಲೀಸ್ ಕೆಲಸಕ್ಕೆ ರಾಜೀನಾಮೆ: ಕಳ್ಳತನ ಪ್ರಕರಣದಲ್ಲಿ ಬಂಧನ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2022, 4:30 IST
Last Updated 23 ಫೆಬ್ರುವರಿ 2022, 4:30 IST
   

ಬೆಂಗಳೂರು: ಮಾರಾಟ ಮಳಿಗೆ ಎದುರು ನಿಲ್ಲಿಸಿದ್ದ ಕಾರು ಕಳ್ಳತನ ಮಾಡಿದ್ದ ಆರೋಪದಡಿ ಪಿಳಕಲ್ ನಜೀರ್ ಅಹ್ಮದ್ ಎಂಬುವರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕೇರಳದ ನಜೀರ್, ಪೋಷಕರ ಜೊತೆ ಬಾಲ್ಯದಲ್ಲಿ ಸೌದಿಗೆ ಹೋಗಿ ನೆಲೆಸಿದ್ದರು. ಅಲ್ಲಿಯೇ ಪೊಲೀಸ್ ಇಲಾಖೆಗೆ ಸೇರಿ 10 ವರ್ಷ ಕೆಲಸ ಮಾಡಿದ್ದರು. ವೈಯಕ್ತಿಕ ಕಾರಣಗಳಿಂದ ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿ, ಕೇರಳಕ್ಕೆ ವಾಪಸು ಬಂದಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಜೀರ್ ಅವರ ಮಗನಿಗೆ ಬೆಂಗಳೂರಿನ ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತ್ತು. ಮಗನ ಜೊತೆ ನಜೀರ್ ನಗರಕ್ಕೆ ಬಂದಿದ್ದರು. ಖರ್ಚಿಗೆ ಮಗ ಹಣ ಕೊಡುತ್ತಿರಲಿಲ್ಲ. ಹೀಗಾಗಿ, ನಜೀರ್ ಕಳ್ಳತನ ಮಾಡಲು ಮುಂದಾಗಿದ್ದರು’ ಎಂದೂ ತಿಳಿಸಿವೆ.

ADVERTISEMENT

‘ಇತ್ತೀಚೆಗಷ್ಟೇ ಖರೀದಿಸಿದ್ದ ಟಾಟಾ ಹ್ಯಾರಿಯರ್ ಕಾರನ್ನು ಮಾಲೀಕರು, ಸರ್ವೀಸ್‌ಗೆಂದು ಮಳಿಗೆ ಬಳಿ ನಿಲ್ಲಿಸಿ ಹೋಗಿದ್ದರು. ಮಳಿಗೆ ಬಂದಿದ್ದ ಆರೋಪಿ, ಕಾರು ಕದ್ದುಕೊಂಡು ಪರಾರಿಯಾಗಿದ್ದರು. ಕಾರಿನಲ್ಲಿ ಅಳವಡಿಸಿದ್ದ ಬ್ಲ್ಯೂಟೂತ್ ಉಪಕರಣದಿಂದ ಆರೋಪಿ ನಜೀರ್ ಸುಳಿವು ಸಿಕ್ಕಿತ್ತು. ಅವರನ್ನು ಬಂಧಿಸಿ ಕಾರು ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.