Cars24 ಸಿಇಒ ವಿಕ್ರಮ್ ಚೋಪ್ರಾ ಹಾಗೂ ಅವರ ಪೋಸ್ಟ್
ಬೆಂಗಳೂರು: ಬೆಂಗಳೂರು ಹಾಗೂ ಕನ್ನಡದ ಬಗ್ಗೆ ಉತ್ತರ ಭಾರತೀಯ ಕೆಲವರು ಆಗಾಗ ತಗಾದೆ ತೆಗೆಯುವುದನ್ನು ನೋಡುತ್ತಿರುತ್ತೇವೆ. ಈ ಪ್ರಕರಣಗಳಿಗೆ ಇದೀಗ ಮತ್ತೊಂದು ಸೇರ್ಪಡೆ.
ಬಳಕೆಯಾದ ಕಾರುಗಳನ್ನು ಕೊಳ್ಳಲು ಹಾಗೂ ಮಾರಲು ಆನ್ಲೈನ್ನಲ್ಲಿ ವೇದಿಕೆ ಸೃಷ್ಟಿಸಿರುವ Cars24 ಕಂಪನಿಯ ಸ್ಥಾಪಕ, ಟೆಕಿ ವಿಕ್ರಮ್ ಚೋಪ್ರಾ ಅವರು ಬೆಂಗಳೂರು ಹಾಗೂ ಕನ್ನಡದ ಬಗ್ಗೆ ಕೊಂಕು ಮಾತನಾಡಿದ್ದಾರೆ.
ಡಿಸೆಂಬರ್ 19ರಂದು ಬೆಳಿಗ್ಗೆ 10 ಗಂಟೆ 8 ನಿಮಿಷಕ್ಕೆ ಎಕ್ಸ್ ತಾಣದಲ್ಲಿ ಪೋಸ್ಟ್ ಒಂದನ್ನು ಮಾಡಿರುವ ವಿಕ್ರಮ್ ಚೋಪ್ರಾ ಅವರು ಉತ್ತರ ಭಾರತೀಯರೇ ಹಲವು ವರ್ಷಗಳ ನಂತರವೂ ನಿಮಗೆ ಬೆಂಗಳೂರಲ್ಲಿ ಕನ್ನಡ ಕಲಿಯಲು, ಮಾತನಾಡಲು ಆಗಿಲ್ಲವೇ? ಹಾಗಾದರೆ ದೆಹಲಿಗೆ ಬನ್ನಿ ಎಂದು ಕರೆ ಕೊಟ್ಟಿದ್ದಾರೆ.
ತಮ್ಮ ಮನೆ ಹತ್ತಿರ ಕೆಲಸ ಮಾಡುವ ಉತ್ಸಾಹಿ ಎಂಜಿನಿಯರ್ಗಳನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿರುವ ಅವರು ದೆಹಲಿ ಎನ್ಸಿಆರ್ ಉತ್ತಮವಾಗಿದೆ ಎಂದು ನಾವು ಹೇಳುತ್ತಿಲ್ಲ, ನಿಜಕ್ಕೂ ಅದು ಉತ್ತಮವಾಗಿಯೇ ಇದೆ, ದೆಲ್ಲಿ ಮೇರಿ ಜಾನ್.. ಎಂದು ಹೇಳಿಕೊಂಡಿದ್ದಾರೆ
ಬೆಂಗಳೂರು ಬಿಟ್ಟು ಬಂದು ದೆಹಲಿಯಲ್ಲಿ ಕೆಲಸ ಮಾಡಲು ಬಯಸುವವರು ನನಗೆ ಸಂದೇಶ ಕಳುಹಿಸಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಬ್ಯಾಕ್ ಟು ದೆಹಲಿ ಎಂದು ವಿಮಾನದ ಚಿತ್ರವನ್ನು ಹಂಚಿಕೊಂಡಿದ್ದಾರೆ.
ವಿಕ್ರಮ್ ಚೋಪ್ರಾ ಅವರ ಈ ಟ್ವೀಟ್ಗೆ ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತದ ಅನೇಕ ನೆಟ್ಟಿಗರ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ದೆಹಲಿ ಚೆನ್ನಾಗಿದೆ ಅಂತಾ ನೀನು ತೋರಿಸು, ನಾನು ನಿಮ್ಮ ಜೊತೆ ಒಂದು ವರ್ಷ ಉಚಿತವಾಗಿ ಕೆಲಸ ಮಾಡುತ್ತೇನೆ ಎಂದು ಟೆಕಿಯೊಬ್ಬರು ಹೇಳಿದ್ದಾರೆ.
ಅನೇಕ ಕನ್ನಡಿಗರು, ಕನ್ನಡಕ್ಕೆ ಕರ್ನಾಟಕಕ್ಕೆ ಮರ್ಯಾದೆ ಕೊಡದ ನಿಮ್ಮಂಥ ಉತ್ತರ ಭಾರತೀಯರು ಮೊದಲು ಇಲ್ಲಿಂದ ತೊಲಗಿ ಎಂದು ಕಮೆಂಟ್ಗಳನ್ನು ಮಾಡಿದ್ದಾರೆ. ಬೆಂಗಳೂರಿಗೆ ಅನ್ನ ಅರಸಿ ಬಂದು ಬದುಕು ಕಟ್ಟಿಕೊಂಡವರಿಗೆ ಕನ್ನಡ ಕಲಿಯಲು ಸಲಹೆ ನೀಡುವ ಬದಲು ಈ ರೀತಿ ಬೇಳೆ ಬೇಯಿಸಿಕೊಳ್ಳುವ ಕೆಲಸ ಬಿಡಿ ಎಂದು ಕೆಲವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.