ADVERTISEMENT

ದಂತ ಚಿಕಿತ್ಸೆಗಾಗಿ ಮೇಲುಕೋಟೆ ಶಾಸಕ ಪುಟ್ಟರಾಜು ಲಂಡನ್‌ಗೆ

ಜಾಮೀನು ಷರತ್ತು ಸಡಿಸಿಲಿದ ನ್ಯಾಯಾಲಯ: ವಿದೇಶಕ್ಕೆ ತೆರಳಲು ಅನುಮತಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 15:58 IST
Last Updated 29 ನವೆಂಬರ್ 2021, 15:58 IST
ಸಿ.ಎಸ್‌.ಪುಟ್ಟರಾಜು
ಸಿ.ಎಸ್‌.ಪುಟ್ಟರಾಜು   

ಬೆಂಗಳೂರು: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 107 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಮೇಲುಕೋಟೆ ಕ್ಷೇತ್ರದ ಜೆಡಿಎಸ್‌ ಶಾಸಕ ಸಿ.ಎಸ್‌. ಪುಟ್ಟರಾಜು ಅವರಿಗೆ ದಂತ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಲು ಸಿಬಿಐ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.

ನಿವೇಶನಗಳ ಹಂಚಿಕೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಸಿಬಿಐ, 24 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಪುಟ್ಟರಾಜು ಈ ಪ್ರಕರಣದಲ್ಲಿ ಐದನೇ ಆರೋಪಿ. ಎಲ್ಲ ಆರೋಪಿಗಳ ವಿರುದ್ಧ ಆರೋಪ ನಿಗದಿಯಾಗಿದ್ದು, ಕಳೆದ ಜೂನ್‌ನಿಂದಲೇ ವಿಚಾರಣೆ ಆರಂಭವಾಗಿದೆ.

ಈ ಪ್ರಕರಣದಲ್ಲಿ ಪುಟ್ಟರಾಜು ಅವರಿಗೆ ಜಾಮೀನು ಮಂಜೂರು ಮಾಡಿದ್ದ ಸಿಬಿಐ ವಿಶೇಷ ನ್ಯಾಯಾಲಯ, ದೇಶ ತೊರೆಯಬಾರದು ಎಂಬ ಷರತ್ತು ವಿಧಿಸಿತ್ತು. ಲಂಡನ್‌ನ ಕೆಂಟ್‌ನಲ್ಲಿರುವ ಹ್ಯಾಮ್‌ಸ್ಟ್ರೀಟ್‌ ಡೆಂಟಲ್‌ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯಲು ಡಿಸೆಂಬರ್‌ 10ರಿಂದ 30ರವರೆಗೆ ಲಂಡನ್‌ಗೆ ತೆರಳಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಶಾಸಕರು, ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಕೋರಿದ್ದರು.

ADVERTISEMENT

ಅರ್ಜಿಯ ವಿಚಾರಣೆ ನಡೆಸಿ ಸೋಮವಾರ ಆದೇಶ ಪ್ರಕಟಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌, ಡಿ.10ರಿಂದ 30ರವರೆಗೆ ಲಂಡನ್‌ಗೆ ತೆರಳಿ ದಂತ ಚಿಕಿತ್ಸೆ ಪಡೆಯಲು ಪುಟ್ಟರಾಜು ಅವರಿಗೆ ಅನುಮತಿ ನೀಡಿದ್ದಾರೆ.

‘ಆರೋಪಿಯು ಲಂಡನ್‌ಗೆ ತೆರಳುವ ಮತ್ತು ಹಿಂದಿರುಗುವ ಪ್ರಯಾಣದ ವೇಳಾಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಮುಂದೆ ಎಲ್ಲ ದಿನಗಳಲ್ಲಿ ವಿಚಾರಣೆಗೆ ಕಡ್ಡಾಯವಾಗಿ ಹಾಜರಿರುವುದಾಗಿ ₹ 5 ಲಕ್ಷ ನಗದು ಭದ್ರತಾ ಠೇವಣಿಯೊಂದಿಗೆ ಪ್ರಮಾಣಪತ್ರ ಸಲ್ಲಿಸಬೇಕು. ಸಾಕ್ಷ್ಯಗಳನ್ನು ತಿರುಚುವ ಅಥವಾ ನಾಶಪಡಿಸುವ ಕೃತ್ಯ ಎಸಗಬಾರದು’ ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.