ಬೆಂಗಳೂರು: ನಗರದಲ್ಲಿ ಸಾರ್ವಜನಿಕರ ಮೊಬೈಲ್ ಸುಲಿಗೆ ಮಾಡಿ ಹೊರ ರಾಜ್ಯದಲ್ಲಿ ಮಾರುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
‘ಪಾದರಾಯನಪುರದ ಅಜ್ಮಲ್ ಪಾಷಾ ಮತ್ತು ಶಿವಾಜಿನಗರದ ಇಜಾಜ್ ಬಂಧಿತರು. ಇವರಿಂದ ₹78.84 ಲಕ್ಷ ಮೌಲ್ಯದ 512 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.
‘ಅಪರಾಧ ಹಿನ್ನೆಲೆಯುಳ್ಳ ಆರೋಪಿಗಳು, ತಮ್ಮದೇ ತಂಡ ಕಟ್ಟಿಕೊಂಡು ಕೃತ್ಯ ಎಸಗುತ್ತಿದ್ದರು. ಇವರಿಬ್ಬರ ಬಂಧನದಿಂದ ಚಾಮರಾಜಪೇಟೆ, ಉಪ್ಪಾರಪೇಟೆ, ಮಾಗಡಿ ರಸ್ತೆ, ಕಾಮಾಕ್ಷಿಪಾಳ್ಯ, ವರ್ತೂರು ಹಾಗೂ ಅಶೋಕನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳು ಪತ್ತೆಯಾಗಿವೆ’ ಎಂದೂ ತಿಳಿಸಿದರು.
‘ಅಜ್ಮಲ್ ಹಾಗೂ ಇಜಾಜ್, ತಂಡದ ರೂವಾರಿಗಳು. ಆರಂಭದಲ್ಲಿ ಇವರಿಬ್ಬರು, ರಸ್ತೆಯಲ್ಲಿ ಸುತ್ತಾಡಿ ಮೊಬೈಲ್ ಸುಲಿಗೆ ಮಾಡುತ್ತಿದ್ದರು. ಇದಾದ ನಂತರ, ಸಹಚರರ ಮೂಲಕ ಸುಲಿಗೆ ಮಾಡಿಸಲಾರಂಭಿಸಿದ್ದರು. ಸದ್ಯ ಇವರಿಬ್ಬರು ಮಾತ್ರ ಸಿಕ್ಕಿಬಿದ್ದಿದ್ದಾರೆ. ಏಳು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದೂ ಹೇಳಿದರು.
ಹೈದರಾಬಾದ್, ಮುಂಬೈನಲ್ಲಿ ಮಾರಾಟ: ‘ಹಗಲು ಹಾಗೂ ರಾತ್ರಿ ನಗರದಲ್ಲಿ ಸುತ್ತಾಡುತ್ತಿದ್ದ ಆರೋಪಿಗಳು, ರಸ್ತೆಯಲ್ಲಿ ಒಂಟಿಯಾಗಿ ಹೋಗುವವರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು. ಕೆಲವೆಡೆ ವಾಹನಗಳನ್ನು ಅಡ್ಡಗಟ್ಟಿ ಮೊಬೈಲ್ ಹಾಗೂ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಂಡು ಪರಾರಿಯಾಗುತ್ತಿದ್ದರು’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.
‘ಮೊಬೈಲ್ಗಳನ್ನು ರಾಜ್ಯದಲ್ಲಿ ಮಾರಿದರೆ, ಪೊಲೀಸರು ಬಂಧಿಸಬಹುದೆಂಬ ಭಯ ಆರೋಪಿಗಳಲ್ಲಿತ್ತು. ಅದೇ ಕಾರಣಕ್ಕೆ ಹೈದರಾಬಾದ್, ಮುಂಬೈ ಹಾಗೂ ದೆಹಲಿಯಲ್ಲಿ ಮೊಬೈಲ್ ಮಾರುತ್ತಿದ್ದರು. ತಿಂಗಳಿಗೊಮ್ಮೆ ಮೊಬೈಲ್ಗಳನ್ನು ಹೊರರಾಜ್ಯಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿಯ ಮಳಿಗೆಗಳಿಗೆ ಕಡಿಮೆ ಬೆಲೆಗೆ ಮಾರುತ್ತಿದ್ದರು. ಬಂದ ಹಣವನ್ನು ಹಂಚಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರು’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.