ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮನಪರಿವರ್ತನೆಗೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಕಾರಾಗೃಹ ಸಿಬ್ಬಂದಿ ಹಾಗೂ ಕೈದಿಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಯಿತು.
ಕಾರಾಗೃಹದೊಳಗಿನ ಆವರಣದಲ್ಲಿರುವ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಸಿಬ್ಬಂದಿ ಹಾಗೂ ಕೈದಿಗಳ ತಂಡಗಳು ಕ್ರಿಕೆಟ್ ಪಂದ್ಯವನ್ನಾಡಿದರು. ಇದರಲ್ಲಿ ಸಿಬ್ಬಂದಿ ತಂಡ ವಿಜಯಶಾಲಿಯಾಯಿತು.
ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಮೈದಾನದ ಸುತ್ತಲು ಹೆಚ್ಚಿನ ಸಂಖ್ಯೆಯಲ್ಲಿ ಕೈದಿಗಳು ಜಮಾಯಿಸಿದ್ದರು. ಚಪ್ಪಾಳೆ ತಟ್ಟಿ ಎರಡೂ ತಂಡಗಳ ಆಟಗಾರರನ್ನು ಹುರಿದುಂಬಿಸಿದರು. ಕೆಲ ಕೈದಿಗಳು, ಬ್ಯಾಟಿಂಗ್ ಹಾಗೂ ಬಾಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದರು. ಆದರೆ, ಸಿಬ್ಬಂದಿ ತಂಡದವರ ಪ್ರದರ್ಶನದ ಎದುರು ಸೋಲುಪ್ಪಿಕೊಂಡರು.
‘ಕ್ರೀಡೆಯಿಂದ ಆರೋಗ್ಯ, ಆರೋಗ್ಯದಿಂದ ಉತ್ತಮ ಆಯುಷ್ಯ’ ಎಂಬ ಮಾತಿನಂತೆ, ಜೈಲಿನಲ್ಲಿ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಳಾಗುತ್ತಿದೆ. ಶನಿವಾರ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೈದಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು’ ಎಂದು ಜೈಲಿನ ಅಧಿಕಾರಿಯೊಬ್ಬರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.