ಬೆಂಗಳೂರು: ಪಾಲಿಕೆಯ ಜಾಗೃತ ಮತ್ತು ತಾಂತ್ರಿಕ ಕೋಶದ (ಟಿವಿಸಿಸಿ) ಮುಖ್ಯ ಎಂಜಿನಿಯರ್ ದೊಡ್ಡಯ್ಯ ಎ.ಬಿ. ಅವರನ್ನು ಪಶ್ಚಿಮ ವಲಯದ ಮುಖ್ಯ ಎಂಜಿನಿಯರ್ ಹುದ್ದೆಗೆ ನಗರಾಭಿವೃದ್ಧಿ ಇಲಾಖೆ ಶುಕ್ರವಾರ ವರ್ಗಾಯಿಸಿದೆ.
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ನಡೆಸಿದ (ಕೆಆರ್ಐಡಿಎಲ್) ಕಾಮಗಾರಿಯಲ್ಲಿ ₹ 118.26 ಕೋಟಿ ಅಕ್ರಮ ನಡೆದಿದೆ ಎಂದು ಲೋಕಾಯುಕ್ತರು 3 ತಿಂಗಳ ಹಿಂದೆ ವರದಿ ಸಲ್ಲಿಸಿದ್ದರು. ಹಣಕಾಸು ಹಗರಣ, ಅವ್ಯವಹಾರಗಳನ್ನು ಪತ್ತೆ ಹಚ್ಚಲು ಬಿಬಿಎಂಪಿಯಲ್ಲಿ ಟಿವಿಸಿಸಿ ಸ್ಥಾಪಿಸಲಾಗಿದೆ. ‘ಕಾಮಗಾರಿಗಳನ್ನು ಜಾರಿಮಾಡದಿದ್ದರೂ, ಅವು ಅನುಷ್ಠಾನ ಆಗಿವೆ’ ಎಂದು ಟಿವಿಸಿಸಿ ಅಧಿಕಾರಿಗಳು ವರದಿ ನೀಡಿ ಬಿಲ್ ಪಾವತಿಗೆ ಸಹಕರಿಸಿರುವುದು ಲೋಕಾಯುಕ್ತ ತನಿಖೆಯಲ್ಲಿ ಗೊತ್ತಾಗಿತ್ತು. ದೊಡ್ಡಯ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರು ಶಿಫಾರಸು ಮಾಡಿದ್ದರು.
ಬಿಬಿಎಂಪಿಯ ಮಲ್ಲೇಶ್ವರ, ಗಾಂಧಿನಗರ ಹಾಗೂ ರಾಜರಾಜೇಶ್ವರಿನಗರ ವಿಭಾಗಗಳಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ನೇತೃತ್ವದ ಸಮಿತಿಯು 254 ಎಂಜಿನಿಯರ್ಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿತ್ತು. ಆ ವರದಿಯಲ್ಲೂ ದೊಡ್ಡಯ್ಯ ಅವರ ಹೆಸರು ಇತ್ತು. ಆದರೆ, ದೊಡ್ಡಯ್ಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದೆ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಿರುವುದು ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪಶ್ಚಿಮ ವಲಯದ ಮುಖ್ಯಎಂಜಿನಿಯರ್ ಪಿ.ವಿಶ್ವನಾಥ್ ಅವರನ್ನು ದಾಸರಹಳ್ಳಿ ವಲಯದ ಮುಖ್ಯ ಎಂಜಿನಿಯರ್ ಹುದ್ದೆಗೆ ವರ್ಗಾಯಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.