
ಸಾವು (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಫೋಟೊ ಶೂಟ್ಗಾಗಿ ತೆಗೆದಿದ್ದ ನೀರಿನ ಗುಂಡಿಗೆ ಬಿದ್ದು ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯ ಗಿಡ್ಡೆನಹಳ್ಳಿಯ ರೆಸಾರ್ಟ್ವೊಂದರಲ್ಲಿ ನಡೆದಿದೆ.
ಜೆ.ಪಿ.ನಗರ ನಿವಾಸಿ ಸ್ವಾತಿ ಅವರ ಪುತ್ರ ಲಕ್ಷ್ಮೀರ್ ಮೃತ ಮಗು. ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗಿಡ್ಡೆನಹಳ್ಳಿಯ ರೆಸಾರ್ಟ್ನಲ್ಲಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸ್ವಾತಿ, ಶನಿವಾರ ತಮ್ಮ ಸ್ನೇಹಿತೆ ಎಂಟು ತಿಂಗಳ ಗರ್ಭಿಣಿಯ ಪೋಟೊ ಶೂಟ್ ಮಾಡಿಸಲು ರೆಸಾರ್ಟ್ಗೆ ಹೋಗಿದ್ದಾರೆ. ಸ್ವಾತಿ ಕೂಡ ತುಂಬು ಗರ್ಭಿಣಿಯಾಗಿದ್ದಾರೆ. ರೆಸಾರ್ಟ್ನಲ್ಲಿ ಫೋಟೊ ಶೂಟ್ಗಾಗಿ ಕೆಲವೆಡೆ ನೀರಿನ ಗುಂಡಿಗಳನ್ನು ತೆಗೆಯಲಾಗಿದೆ. ಮಧ್ಯಾಹ್ನ ಲಕ್ಷ್ಮೀರ್ನನ್ನು ಕುರ್ಚಿ ಮೇಲೆ ಕೂರಿಸಿ, ಸಮೀಪದಲ್ಲೇ ಸ್ನೇಹಿತೆಯ ಫೋಟೊ ಶೂಟ್ ಮಾಡಿಸುವ ಸ್ಥಳಕ್ಕೆ ಸ್ವಾತಿ ಹೋಗಿದ್ದಾರೆ.
ಈ ವೇಳೆ ಲಕ್ಷ್ಮೀರ್ ಚೇರ್ನಿಂದ ಇಳಿದು ನೀರಿನ ಗುಂಡಿ ಕಡೆ ಹೋಗಿದ್ದು, ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ. ಕೆಲ ಹೊತ್ತಿನ ಬಳಿಕ ಮಗ ನಾಪತ್ತೆಯಾದ ಬಗ್ಗೆ ಹುಡುಕಾಟ ನಡೆಸಿದಾಗ ನೀರಿನ ಗುಂಡಿಯಲ್ಲಿ ಮಗು ಬಿದ್ದಿರುವುದು ಗೊತ್ತಾಗಿದೆ. ವಿಚಾರ ತಿಳಿದ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ, ಕುಟುಂಬ ಸದಸ್ಯರಿಗೆ ಮೃತದೇಹ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಮಾದನಾಯನಕಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಾತಿ ಅವರ ಪತಿ ಕೂಡ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಾರ್ಯನಿಮಿತ್ತ ಅಮೆರಿಕಕ್ಕೆ ತೆರಳಿದ್ದರು. ಈಗಾಗಲೇ ಅವರಿಗೆ ವಿಷಯ ತಿಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.