ಕಬ್ಬನ್ ಉದ್ಯಾನದ ಆವರಣದಲ್ಲಿ ಹೂರಾಶಿಯಲ್ಲಿ ಅರಳಿದ ಕಲಾಕೃತಿಗೆ ಅಂತಿಮ ಸ್ಪರ್ಶ ನೀಡಿದ ಕಲಾವಿದರು
ಪ್ರಜಾವಾಣಿ ಚಿತ್ರ: ಎಸ್.ಕೆ. ದಿನೇಶ್
ಬೆಂಗಳೂರು: ಮಕ್ಕಳ ದಿನಾಚರಣೆಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಜವಾಹರ ಬಾಲಭವನ ಸೊಸೈಟಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ಕಬ್ಬನ್ ಉದ್ಯಾನದ ಆವರಣದಲ್ಲಿರುವ ಬಾಲಭವನದಲ್ಲಿ ಮಕ್ಕಳ ವಿಷಯಾಧಾರಿತ ಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.
ಇದಕ್ಕಾಗಿ ಈಗಾಗಲೇ ತೋಟಗಾರಿಕೆ ಇಲಾಖೆ ವಿವಿಧ ಬಗೆಯ ಆಲಂಕಾರಿಕ, ದೇಶಿ–ವಿದೇಶಿ ಹೂಗಳ ಕುಂಡಗಳನ್ನು ಸಿದ್ಧತೆ ಮಾಡಿಕೊಂಡಿದೆ. ರಾಕೆಟ್, ನವಿಲು, ಆನೆ ಕುಟುಂಬ, ರೋಬೊ, ಚಿಟ್ಟೆ, ಡೈನೋಸಾರಸ್, ಬಾತುಕೋಳಿ ಸೇರಿದಂತೆ ವಿವಿಧ ಕಲಾಕೃತಿಗಳು ಪುಷ್ಪಗಳಲ್ಲಿ ಅರಳಿ ನಿಂತಿದ್ದು, ಮಕ್ಕಳನ್ನು ಕೈಬೀಸಿ ಕರೆಯುತ್ತಿವೆ. ಹೂ ರಾಶಿಯಲ್ಲಿ ಅರಳಿದ ಕಲಾಕೃತಿಗಳು ಚಿಣ್ಣರನ್ನು ಆಕರ್ಷಿಸುತ್ತಿವೆ.
25 ಸಾವಿರ ಹೂ ಕುಂಡಗಳನ್ನು ಕಬ್ಬನ್ ಉದ್ಯಾನದ ಬ್ಯಾಂಡ್ ಸ್ಟ್ಯಾಂಡ್ ಹತ್ತಿರ, ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಮುಂಭಾಗದಲ್ಲಿ ಹಾಗೂ ಬಾಲಭವನದ ಆವರಣದಲ್ಲಿ ಜೋಡಿಸಿ ಇಡಲಾಗಿದೆ. ಈ ಪುಷ್ಪ ಪ್ರದರ್ಶನವೂ ಮೂರು ದಿನ ನಡೆಯಲಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ನಡೆಯಲಿದ್ದು, ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ (ಕಬ್ಬನ್ ಉದ್ಯಾನ) ಕುಸುಮಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ನ. 29ರ ಬೆಳಿಗ್ಗೆ 10ಕ್ಕೆ ನಡೆಯುವ ಮಕ್ಕಳ ದಿನಾಚರಣೆ–2024 ಹಾಗೂ ಜವಾಹರ ಬಾಲ ಭವನ ಕಲಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಉದ್ಘಾಟಿಸಲಿದ್ದಾರೆ. ಮಕ್ಕಳಿಗೆ ಶೌರ್ಯ ಪ್ರಶಸ್ತಿ, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಮಾಡಿದ ಸಂಸ್ಥೆ ವಿಭಾಗ ಹಾಗೂ ವ್ಯಕ್ತಿ ವಿಭಾಗ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ’ ಎಂದು ಜವಾಹರ ಬಾಲಭವನ ಸೊಸೈಟಿ ಅಧ್ಯಕ್ಷ ಬಿ.ಆರ್. ನಾಯ್ಡು ಮಾಹಿತಿ ನೀಡಿದರು.
ಕಬ್ಬನ್ ಉದ್ಯಾನದ ಆವರಣದಲ್ಲಿ ಹೂರಾಶಿಯಲ್ಲಿ ಅರಳಿದ ಕಲಾಕೃತಿಗೆ ಅಂತಿಮ ಸ್ಪರ್ಷ ನೀಡಿದ ಕಲಾವಿದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.