ADVERTISEMENT

ಸಂಕ್ಷಿಪ್ತ ಸುದ್ದಿಗಳು: ಚಿತ್ರಸಂತೆಗೆ ವಿಶೇಷ ಬಸ್‌

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 14:07 IST
Last Updated 31 ಡಿಸೆಂಬರ್ 2025, 14:07 IST
<div class="paragraphs"><p> ಕರ್ನಾಟಕ ಚಿತ್ರಕಲಾ ಪರಿಷತ್</p></div>

ಕರ್ನಾಟಕ ಚಿತ್ರಕಲಾ ಪರಿಷತ್

   

ನಾರಿ ಶಕ್ತಿ ರಾಷ್ಟ್ರೀಯ ಸಮ್ಮೇಳನ 4ಕ್ಕೆ

ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘವು ಜನವರಿ 4ರಂದು ಹೊಸೂರು ಮುಖ್ಯರಸ್ತೆಯಲ್ಲಿರುವ ನಿಮ್ಹಾನ್ಸ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಾರಿ ಶಕ್ತಿ ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿದೆ. 

ADVERTISEMENT

ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ, ನಿಟ್ಟೂರಿನ ಶ್ರೀನಾರಾಯಣಗುರು ಮಹಾ ಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಅವರು ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಲಿದ್ದಾರೆ.

ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಮಧು ಬಂಗಾರಪ್ಪ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಎಚ್.ಆರ್. ಗವಿಯಪ್ಪ, ಮಾಜಿ ಸಚಿವರಾದ ಮಾಲಿಕಯ್ಯ ಗುತ್ತೇದಾರ್, ವಿನಯ್ ಕುಮಾರ್ ಸೊರಕೆ, ಜಯಮಾಲಾ, ಕರ್ನಾಟಕ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಸೌಮ್ಯಾರೆಡ್ಡಿ, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ. ತಿಮ್ಮೇಗೌಡ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

ಚಿತ್ರಸಂತೆಗೆ ವಿಶೇಷ ಬಸ್‌

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಜ.4ರಂದು ಆಯೋಜಿಸಿರುವ ಚಿತ್ರಸಂತೆಗೆ ತೆರಳುವವರಿಗೆ ಅನುಕೂಲ ಮಾಡಿಕೊಡಲು ಬಿಎಂಟಿಸಿ ಬಸ್‌ಗಳ ವಿಶೇಷ ಸಂಚಾರ ಇರಲಿದೆ.

ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ಪ್ರತಿ ಹತ್ತು ನಿಮಿಷಕ್ಕೊಂದು ಬಸ್‌ ಇರಲಿದೆ. ಬಸ್‌ ಪ್ರಯಾಣ ದರ ₹15 ನಿಗದಿ ಮಾಡಲಾಗಿದೆ. ಮೆಜೆಸ್ಟಿಕ್‌ನಲ್ಲಿರುವ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಆನಂದ ರಾವ್‌ ಸರ್ಕಲ್‌, ವಿಧಾನ ಸೌಧ, ಶಿವಾನಂದ ಸ್ಟೋರ್‌ ಮೂಲಕ ಮತ್ತು ಮಂತ್ರಿ ಮಾಲ್‌ ಮೆಟ್ರೊ ನಿಲ್ದಾಣ, ಲಿಂಕ್‌ ರಸ್ತೆ, ಶಿವಾನಂದ ಸ್ಟೋರ್‌ ಮೂಲಕ ಬಸ್‌ಗಳು ಸಂಚರಿಸಲಿವೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

‘ಮಹಿಳಾ ಸೌಧ ನಿರ್ಮಿಸಿ’

ಬೆಂಗಳೂರು: ಮುಂಬರುವ ಬಜೆಟ್‌ನಲ್ಲಿ ಮಹಿಳಾ ಸೌಧ ನಿರ್ಮಿಸಲು ಅನುದಾನ ಒದಗಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಒತ್ತಾಯಿಸಿದ್ದಾರೆ. 

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ‘ರಾಜ್ಯ ಮಹಿಳಾ ಆಯೋಗ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸ್ವಂತ ಕಚೇರಿಗಳಿಲ್ಲ. ಮಹಿಳಾ ಸೌಧ ನಿರ್ಮಾಣ ಮಾಡಿದರೆ, ಮಹಿಳೆಯರ ಹಾಗೂ ಮಕ್ಕಳ ಸಮಸ್ಯೆಗಳನ್ನು ಒಂದೇ ಸೂರಿನಡಿಯಲ್ಲಿ ಬಗೆಹರಿಸಲು ಸಹಾಯವಾಗಲಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕಾಶ್‌ಗೆ ಫೆಲೋಶಿಪ್

ಬೆಂಗಳೂರು: ನವದೆಹಲಿಯ ರಾಷ್ಟ್ರೀಯ ಕೃಷಿ ವಿಜ್ಞಾನಿಗಳ ಅಕಾಡೆಮಿಯ (ಎನ್‌ಎಎಎಸ್‌) 2026ನೇ ಸಾಲಿನ ಫೆಲೋಶಿಪ್‌ಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಡೀನ್‌ ಎನ್‌.ಬಿ. ಪ್ರಕಾಶ್‌ ಆಯ್ಕೆಯಾಗಿದ್ದಾರೆ. 

ಎನ್.ಬಿ. ಪ್ರಕಾಶ್ ಅವರು ಮಣ್ಣಿನ ಫಲವತ್ತತೆ, ಸುಸ್ಥಿರ ಕೃಷಿಯ ಕುರಿತು ಕೈಗೊಂಡ ಸಂಶೋಧನಾ ಚಟುವಟಿಕೆಗಳ ಫಲಿತಾಂಶ ಹಾಗೂ ಸಿಲಿಕಾನ್‌ ಪೋಷಕಾಂಶದ ಉಪಯುಕ್ತತೆ ಬಗ್ಗೆ ನಡೆಸಿದ ಸಂಶೋಧನೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.