
ಬೆಂಗಳೂರು: ಕ್ರಿಸ್ತು ಜಯಂತಿ ಕಾಲೇಜು ‘ಡೀಮ್ಡ್ ಟು ಬಿ ವಿಶ್ವವಿದ್ಯಾಲಯ’ವಾಗಿ ಕಾರ್ಯಾರಂಭಿಸಿದೆ.
ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯವು ‘ಕ್ರಿಸ್ತು ಜಯಂತಿ ಡೀಮ್ಡ್ ಟುಬಿ ವಿಶ್ವವಿದ್ಯಾಲಯಕ್ಕೆ’ ಅನುಮೋದನೆ ನೀಡಿರುವುದರಿಂದ, ಅದರ ಐತಿಹಾಸಿಕ ಮೈಲಿಗಲ್ಲಿನ ಸ್ಮರಣೆಗಾಗಿ ಸೋಮವಾರ ‘ಉದ್ಘಾಟನಾ ಸಮಾರಂಭ’ ಆಯೋಜಿಸಲಾಗಿತ್ತು.
'ವಿಶ್ವವಿದ್ಯಾಲಯದ ಲೋಗೊ ಬಿಡುಗಡೆ ಮಾಡಿ ಮಾತನಾಡಿದ ದಿ ಹಿಂದೂ ಪತ್ರಿಕೆಯ ಮಾಜಿ ಸಂಪಾದಕ ಎನ್. ರಾಮ್, ಗುಣಮಟ್ಟದ ಶಿಕ್ಷಣ ನೀಡಲು ಮತ್ತು ಸಮಾಜದ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ಲಭ್ಯವಾಗುವಂತೆ ಮಾಡಲು ವಿಶ್ವವಿದ್ಯಾಲಯ ಕೈಗೊಂಡಿರುವ ಕಾರ್ಯಗಳನ್ನು ಶ್ಲಾಘಿಸಿದರು.
ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಜೋಶಿ ಮ್ಯಾಥ್ಯೂ ರಚಿಸಿರುವ 'ಲುಮಿನೆಸೆನ್ಸ್' – ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಬೆಳ್ಳಿ ಪಯಣ ಎಂಬ ಕೃತಿಯನ್ನು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಕುಲಪತಿ ಅಗಸ್ಟೀನ್ ಜಾರ್ಜ್ ಬಿಡುಗಡೆ ಮಾಡಿದರು.
ಕಾರ್ಮೆಲೈಟ್ಸ್ ಆಫ್ ಮೇರಿ ಇಮ್ಮಾಕ್ಯುಲೇಟ್ (ಸಿಎಂಐ) ಸಭೆಯ ಪ್ರಿಯರ್ ಜನರಲ್ ಥಾಮಸ್ ಚಾಥಂಪರಂಪಿಲ್ ಅವರು, ವಿದ್ಯಾರ್ಥಿಗಳಿಗೆ ಅಂತರ್ಗತ ಮತ್ತು ಸಮಗ್ರ ಜೀವನ ಶಿಕ್ಷಣವನ್ನು ಬೆಳೆಸುವಲ್ಲಿ ವಿಶ್ವವಿದ್ಯಾನಿಲಯದ ಪಾತ್ರದ ಬಗ್ಗೆ ಒತ್ತಿಹೇಳಿದರು.
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಕುಲಾಧಿಪತಿ ಅಬ್ರಹಾಂ ವೆಟ್ಟಿಯಂಕಲ್ ಭಾಗವಹಿಸಿದ್ದರು. ಸಂಸ್ಥೆಯ ಎಲ್ಲಾ ಮಾಜಿ ಪ್ರಾಂಶುಪಾಲರು ಮತ್ತು ಸಿಎಂಐ ಸಭೆಯ ಮಿಷನರಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.