ADVERTISEMENT

ಬೆಂಗಳೂರು| ಓಂ ಶಕ್ತಿ‌ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಬಾಲಕಿ‌ ತಲೆಗೆ ಗಾಯ

ಬಿಗುವಿನ ವಾತಾವರಣ: ಕೆಎಸ್ ಆರ್ ಪಿ ತುಕಡಿ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 20:50 IST
Last Updated 4 ಜನವರಿ 2026, 20:50 IST
ಜೆ ಜೆ ನಗರ
ಜೆ ಜೆ ನಗರ   

ಬೆಂಗಳೂರು: ದೇವಿಯ ತೇರು ಎಳೆಯುವ ವೇಳೆ ಓಂ ಶಕ್ತಿ ಮಾಲಾಧಾರಿಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿರುವ ಘಟನೆ ಜೆ.ಜೆ. ನಗರ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದ್ದು, ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು

ಜೆ.ಜೆ.ನಗರದ ವಿ.ಎಸ್ ಗಾರ್ಡನ್ ಓಂ ಶಕ್ತಿ ದೇವಸ್ಥಾನದ ಬಳಿ ಭಾನುವಾರ ರಾತ್ರಿ 8 ಗಂಟೆಗೆ ಈ ಘಟನೆ ನಡೆದಿದೆ.

ಘಟನೆಯಲ್ಲಿ ವರದರಾಜನ್‌ ಅವರ ಮಗಳ ತಲೆಗೆ ಗಂಭೀರವಾದ ಗಾಯವಾಗಿದೆ. ಜತೆಗೆ ಇಬ್ಬರು ಮಹಿಳೆಯರ ಕಾಲಿಗೆ ಗಾಯವಾಗಿದೆ.

ADVERTISEMENT

ಸ್ಥಳಕ್ಕೆ ಜೆ.ಜೆ ನಗರ ಠಾಣೆ ಪೊಲೀಸರು, ಎಸಿಪಿ ಭರತ್‌ರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ: ಕಲ್ಲು ತೂರಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಓಂ ಶಕ್ತಿ ಮಾಲಾಧಾರಿಗಳು ಮತ್ತು ನೂರಾರು ಸ್ಥಳೀಯರು ಜೆ.ಜೆ ನಗರ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಮುಂಜಾಗ್ರತಾ ಕ್ರಮವಾಗಿ ದೇವಾಲಯದ ಮುಂದೆ ಹಾಗೂ ಜೆ.ಜೆ ನಗರ ಠಾಣೆ ಮುಂದೆ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಸ್ಥಳದಿಂದ ತೆರಳುವಂತೆ ಸೂಚಿಸಿದರು. ಪೊಲೀಸರ ಸೂಚನೆಗೆ ಜಗ್ಗದೇ ನೂರಾರು ಮಂದಿ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

'ಮಾರಮ್ಮ ದೇವಾಲಯದ ಬಳಿ ಕಳೆದ ಬಾರಿ ಅನ್ಯಕೋಮಿನವರು ಕಲ್ಲು ತೂರಿದ್ದರು. ಇತ್ತೀಚೆಗೆ ಅಯ್ಯಪ್ಪನ ಭಜನೆ ಮಾಡುತ್ತಿರುವಾಗ ಅನ್ಯಕೋಮಿನವರು ನೀರಿನ ಬಾಟಲ್‌ಗಳನ್ನು ತೂರಿದ್ದರು. ಈ ರೀತಿಯ ಘಟನೆ 3-4 ಬಾರಿ ಆಗಿದೆ. ಕಲ್ಲು ತೂರಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು' ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

'ಕಲ್ಲು ಎಸೆದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು' ಎಂದು ಬಾಲಕಿ ತಂದೆ ವರದರಾಜನ್ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.