ಪ್ರಾತಿನಿಧಿಕ ಚಿತ್ರ
ಬೆಂಗಳೂರು: ರಾಜರಾಜೇಶ್ವರಿ ನಗರ ವಲಯದ ಹಲವು ಪ್ರದೇಶಗಳಲ್ಲಿ ಪಾದಚಾರಿ ಮಾರ್ಗದಲ್ಲಿರುವ ಒತ್ತುವರಿಯನ್ನು ಜುಲೈ 11ರಂದು ತೆರವು ಮಾಡಲಾಗುತ್ತದೆ ಎಂದು ಬಿಬಿಎಂಪಿ ವಲಯ ಆಯುಕ್ತ ಬಿ.ಸಿ. ಸತೀಶ್ ತಿಳಿಸಿದರು.
ಮುಖ್ಯ ಆಯುಕ್ತರ ನಿರ್ದೇಶನದಂತೆ ಪಾದಚಾರಿಗಳಿಗೆ ಅಡೆತಡೆಗಳಿಲ್ಲದ ಪಾದಚಾರಿ ಮಾರ್ಗವನ್ನು ಕಲ್ಪಿಸಲಾಗುತ್ತಿದೆ. ಹೀಗಾಗಿ, ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪ್ರತಿ ತಿಂಗಳ ಒಂದನೇ ಮತ್ತು ಮೂರನೇ ಶನಿವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶುಕ್ರವಾರದಂದು ನಡೆಸಲಾಗುತ್ತದೆ ಎಂದರು.
ರಾಜರಾಜೇಶ್ವರಿನಗರ ವಿಭಾಗದ ಬಿಇಎಂಎಲ್ ಕಾಂಪ್ಲೆಕ್ಸ್ನಿಂದ ಬಿಎಂಟಿಸಿ ಬಸ್ ಡಿಪೋವರೆಗಿನ ಮುಖ್ಯರಸ್ತೆ ಹಾಗೂ ಕೆಂಗೇರಿ ವಿಭಾಗದ ದೀಪಾ ಕಾಂಪ್ಲೆಕ್ಸ್ನಿಂದ ಮುದ್ದಿನಪಾಳ್ಯ ವೃತ್ತದವರೆಗಿನ ಮುಖ್ಯರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿಯನ್ನು ಶುಕ್ರವಾರ ತೆರವು ಮಾಡಲಾಗುತ್ತದೆ ಎಂದು ತಿಳಿಸಿದರು.
ಒತ್ತುವರಿ ಮಾಡಿಕೊಂಡಿರುವ ಅಂಗಡಿಯವರು, ಬೀದಿಬದಿ ವ್ಯಾಪಾರಿಗಳು ಹಾಗೂ ಇನ್ನಿತರ ಒತ್ತುವರಿದಾರರು ಪಾದಚಾರಿ ಮಾರ್ಗವನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಬೇಕು. ಇಲ್ಲದಿದ್ದರೆ, ಬಿಬಿಎಂಪಿ ವತಿಯಿಂದ ಒತ್ತುವರಿ ತೆರವುಗೊಳಿಸಿ, ನಿಯಮಾನುಸಾರ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.