ಬೆಂಗಳೂರು: ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಅರಮನೆ ಮೈದಾನದ ಪ್ರಿನ್ಸಸ್ ಗಾಲ್ಫ್ ಆವರಣದ ಬುಧವಾರ ಕಳೆಗಟ್ಟಿತ್ತು.
ಬಹುತೇಕ ಮಹಿಳೆಯರು ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದರು. ಕೋವಿಡ್ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಸಾಧನೆ ಮಾಡಿದ ಮಹಿಳೆಯರು, ಸಂಘ–ಸಂಸ್ಥೆಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ವಿತರಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಮಹಿಳಾ ಪರ ಕಾಳಜಿ ಹೊಂದಿರುವ ಸರ್ಕಾರ ನಮ್ಮದು. ಮಹಿಳಾ ಸಬಲೀಕರಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಬಾರಿಯ ಬಜೆಟ್ನಲ್ಲಿ ಹಲವು ಘೋಷಣೆಗಳನ್ನು ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ₹37,180 ಕೋಟಿ ಅನುದಾನ ತೆಗೆದಿರಿಸಲಾಗಿದೆ’ ಎಂದರು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ‘ಮಹಿಳೆಯರು ಪುರುಷರಿಗೆ ಸಮಾನರೆಂದು 12ನೇ ಶತಮಾನದಲ್ಲಿಯೇ ಸಾರಿದವರು ಜಗಜ್ಯೋತಿ ಬಸವೇಶ್ವರರು. ಅವರ ಇಂತಹ ಚಿಂತನೆಗಳ ಹಿಂದೆ ಇದ್ದದ್ದು ಅವರ ಅಕ್ಕ ನಾಗಮ್ಮ. ರಾಜರು ಸಾಮ್ರಾಜ್ಯಕ್ಕಾಗಿ ಖಡ್ಗ ಹಿಡಿದು ಹೋರಾಡಿದರೆ ಜ್ಞಾನಕ್ಕಾಗಿ ಕತ್ತಿ ಹಿಡಿದವರು ನಾಗಮ್ಮ. ಅವರ ಕಾರ್ಯಗಳನ್ನು ಸ್ಮರಿಸುವ ಕೆಲಸ ಹೆಚ್ಚಾಗಬೇಕು’ ಎಂದರು.
ಭಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು ಸ್ವಾಮೀಜಿ, ‘ಅಕ್ಕ ನಾಗಮ್ಮನವರು ಬಸವಣ್ಣನವರ ವ್ಯಕ್ತಿತ್ವ ರೂಪಿಸಿದ ಕ್ರಾಂತಿ ಗಂಗೋತ್ರಿ’ ಎಂದು ಸ್ಮರಿಸಿದರು.
ಸಂಘ–ಸಂಸ್ಥೆಗಳು ಸೇರಿ 36 ಮಹಿಳೆಯರು ಹಾಗೂ 13 ಮಕ್ಕಳಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ, ಮಕ್ಕಳ ಹೃದಯರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.