ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಜೀವನ್ಬಿಮಾ ನಗರ ಠಾಣೆ ಪೊಲೀಸರು ಬಂಧಿಸಿದ್ದ ಆರೋಪಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಠಾಣೆಯನ್ನೇ ಇಂದಿರಾನಗರಕ್ಕೆ ಸ್ಥಳಾಂತರಿಸಲಾಗಿದೆ.
ಸ್ಥಳೀಯ ನಿವಾಸಿಯಾದ ಆರೋಪಿ, ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ. ನೊಂದ ಯುವತಿ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ಜೂನ್ 1ರಂದು ಸಂಜೆ 4.45ರ ಸುಮಾರಿಗೆ ಮೆಯೋಹಾಲ್ ಕೋರ್ಟ್ಗೆ ಹಾಜರುಪಡಿಸಿದ್ದರು. ನಂತರ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡಿದ್ದರು.
ಇದರ ನಡುವೆಯೇ ಆರೋಪಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ, ವರದಿ ಬರುವುದು ತಡವಾಗಿತ್ತು. ಹೀಗಾಗಿ ಠಾಣೆಯಲ್ಲೇ ಆರೋಪಿಯನ್ನು ಇಟ್ಟುಕೊಂಡು ವಿಚಾರಣೆ ನಡೆಸಲಾಗುತ್ತಿತ್ತು. ಶುಕ್ರವಾರವಷ್ಟೇ ಆರೋಪಿ ವರದಿ ಪಾಸಿಟಿವ್ ಬಂದಿದ್ದು, ಆತನ ವಿರುದ್ಧ ದೂರು ನೀಡಿದ್ದ ಯುವತಿ ಹಾಗೂ ಠಾಣೆ ಪಿಎಸ್ಐ ಸೇರಿ 25 ಮಂದಿಯನ್ನು ಬಿಬಿಎಂಪಿ ಹಾಗೂ ಆರೋಗ್ಯ ಅಧಿಕಾರಿಗಳು ಈಗಾಗಲೇ ಕ್ವಾರಂಟೈನ್ ಮಾಡಿದ್ದಾರೆ.
ಕಲಾಪ ತಾತ್ಕಾಲಿಕ ಸ್ಥಗಿತ: ಆರೋಪಿಗೆ ಕೊರೊನಾ ಇರುವುದು ಗೊತ್ತಾಗುತ್ತಿದ್ದಂತೆ ಮೆಯೋಹಾಲ್ ಕೋರ್ಟ್ನಲ್ಲಿ ನೇರ ಕಲಾಪವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ನ್ಯಾಯಾಧೀಶರು ನೋಟಿಸ್ ಹೊರಡಿಸಿದ್ದಾರೆ.
‘ಮೆಯೋಹಾಲ್ ಕೋರ್ಟ್ ಸ್ಯಾನಿಟೈಸರ್ ಮಾಡುವಂತೆ ಆದೇಶಿಸಲಾಗಿದೆ. ಶನಿವಾರದಿಂದಲೇ (ಜೂನ್ 6) ನೇರ ಕಲಾಪವನ್ನು ಸ್ಥಗಿತಗೊಳಿಸಲಾಗಿದೆ. ಯಾರಿಗೂ ಕೋರ್ಟ್ನೊಳಗೆ ಪ್ರವೇಶವಿರುವುದಿಲ್ಲ. ತುರ್ತು ಪ್ರಕರಣಗಳನ್ನು ಮಾತ್ರ ವಿಡಿಯೊ ಕಾನ್ಪರೆನ್ಸ್ ಮೂಲಕ ನಡೆಸಲಾಗುವುದು’ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.