ADVERTISEMENT

‘ವಿಶ್ವಾಸಾರ್ಹ ಆ್ಯಪ್‌ಗಳ ಕೊರತೆಯೇ ಸವಾಲು’

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 16:53 IST
Last Updated 26 ಜುಲೈ 2020, 16:53 IST

ಬೆಂಗಳೂರು: ‘ಕೋವಿಡ್‌ ಸಂದರ್ಭದಲ್ಲಿ ಕಾನೂನು ಶಿಕ್ಷಣ ಗುಣಮಟ್ಟವನ್ನು ಕಾಯ್ದುಕೊಳ್ಳಲು ಹಲವು ಅಡೆ–ತಡೆಗಳನ್ನು ಎದುರಿಸಬೇಕಾಗಿದೆ. ಅಂತರ್ಜಾಲದ ಸಮಸ್ಯೆ ಜೊತೆಗೆ ವಿಶ್ವಾಸಾರ್ಹ ಆನ್‌ಲೈನ್‌ ಆ್ಯಪ್‌ಗಳ ಕೊರತೆ ದೊಡ್ಡ ಸವಾಲಾಗಿದೆ’ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್‌ ಅಭಿಪ್ರಾಯಪಟ್ಟರು.

ಬೆಂಗಳೂರು ವಿಶ್ವವಿದ್ಯಾಲಯವು ‘ಕೋವಿಡ್‌ ಸಂದರ್ಭದಲ್ಲಿ ಕಾನೂನು ಶಿಕ್ಷಣಗಳ ಮುಂದಿರುವ ಸವಾಲುಗಳು’ ಕುರಿತು ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಇಂತಹ ಸಂದರ್ಭದಲ್ಲಿ ಕಾನೂನು ಸಂಸ್ಥೆಗಳು ಹಾಗೂ ಅಧ್ಯಾಪಕರು ಇ–ಸಂಪನ್ಮೂಲಗಳನ್ನು ಹಾಗೂ ಉತ್ತಮ ಗುಣಮಟ್ಟದ ಲೇಖನಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಬೇಕು. ಭೌತಿಕ ತರಗತಿಗಳನ್ನು ಡಿಜಿಟಲ್‌ ತರಗತಿಗಳಿಗೆ ವರ್ಗಾಯಿಸುವ ಕೌಶಲ ಪಡೆಯಬೇಕು’ ಎಂದು ಸಲಹೆ ನೀಡಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ, ‘ಭೌತಿಕ ನ್ಯಾಯಾಲಯಗಳು ಕೂಡ ಡಿಜಿಟಲ್ ನ್ಯಾಯಾಲಯಗಳಾಗಿ ಪರಿವರ್ತನೆಯಾಗಬೇಕು' ಎಂದರು.

ADVERTISEMENT

ದೆಹಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ರಣಬೀರ್ ಸಿಂಗ್, ಅಸ್ಸಾಂ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಜೆ.ಎಸ್ ಪಾಟೀಲ, ಅಖಿಲ ಭಾರತೀಯ ಕಾನೂನು ಪರಿಷತ್ತಿನ ಸದಸ್ಯ ಸದಾಶಿವರೆಡ್ಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.