ADVERTISEMENT

ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಗೆ ನೆರವಾದ ಪಾಲಿಕೆ ಸದಸ್ಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 13:16 IST
Last Updated 13 ಜುಲೈ 2020, 13:16 IST
ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಪಾಲಿಕೆ ಸದಸ್ಯ ಎಂ.ಶಿವರಾಜು ನೆರವಾದರು
ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಪಾಲಿಕೆ ಸದಸ್ಯ ಎಂ.ಶಿವರಾಜು ನೆರವಾದರು   

ಬೆಂಗಳೂರು: ಪ್ರಜ್ಞೆ ತಪ್ಪಿ ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಶಂಕರಮಠ ವಾರ್ಡ್‌ನ ಪಾಲಿಕೆ ಸದಸ್ಯ ಎಂ.ಶಿವರಾಜು ಅವರು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸುವ ಮೂಲಕ ಅವರಿಗೆ ನೆರವಾದರು.

ಶಂಕರ ಮಠ ವಾರ್ಡ್‌ನ ಕಿರ್ಲೋಸ್ಕರ್‌ ಕಾಲೊನಿ ಬಳಿ ವ್ಯಕ್ತಿಯೊಬ್ಬರು (ಸುಮಾರು 55 ವರ್ಷ) ರಸ್ತೆ ಬದಿ ಬಿದ್ದಿದ್ದರು. ಕೊರೊನಾ ಸೊಂಕಿನಿಂದ ವ್ಯಕ್ತಿ ಬಿದ್ದಿರಬಹುದು ಎಂಬ ಭಯದಿಂದ ಜನ ಅವರನ್ನು ನೋಡಿದರೂ ನೆರವಿಗೆ ಧಾವಿಸುವ ಧೈರ್ಯ ಮಾಡಿರಲಿಲ್ಲ. ಅಲ್ಲಿ ಸೇರಿದ್ದವರು ಆಂಬುಲೆನ್ಸ್‌ಗಾಗಿ 108ಕ್ಕೆ ಕರೆ ಮಾಡಿದರೂ ಸ್ಪಂದನೆ ಸಿಕ್ಕಿರಲಿಲ್ಲ.

ಕಿರ್ಲೋಸ್ಕರ್‌ ಕಾಲೋನಿಯಲ್ಲಿ ವಾರ್ಡ್‌ ಕಚೇರಿಯನ್ನು ಹೊಂದಿರುವ ಶಿವರಾಜು ಅವರು ಅದೇ ಮಾರ್ಗವಾಗಿ ಸಾಗುತ್ತಿದ್ದರು. ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಯನ್ನು ನೋಡಿ ಅವರನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರು.

ADVERTISEMENT

‘ಸುಮಾರು ಒಂದು ಗಂಟೆಯಿಂದ ವ್ಯಕ್ತಿ ಬಿದ್ದಿದ್ದ ವಿಷಯ ತಿಳಿಯಿತು. ವ್ಯಕ್ತಿ ಉಸಿರಾಡುತ್ತಿದ್ದರು. ವ್ಯಕ್ತಿಯನ್ನು ಮುಟ್ಟಲು ಜನ ಹಿಂದೇಟು ಹಾಕುತ್ತಿದ್ದರು. ಬಳಿಕ ನಾನು ಹಾಗೂ ಮತ್ತೆ ಮೂವರು ಸೇರಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಿಕೊಂಡು ಅವರನ್ನು ಆಟೊರಿಕ್ಷಾದಲ್ಲಿ ಕೂರಿಸಿ ಅವರನ್ನು ಕುರುಬರಹಳ್ಳಿಯ ಲೋಟಸ್‌ ಆಸ್ಪತ್ರೆಗೆ ಕಳುಹಿಸಿದೆವು’ ಎಂದು ಶಿವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅವರು ಕಮಲಾನಗರದ ನಿವಾಸಿ. ಅವರಲ್ಲಿ ಕೊರೊನಾದ ಲಕ್ಷಣಗಳಿರಲಿಲ್ಲ. ಅವರಿಗೆ ಮೂರ್ಚೆ ರೋಗವಿತ್ತಂತೆ. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಅವರು ಚೇತರಿಸಿಕೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.