ADVERTISEMENT

ಕೋವಿಡ್‌: ಮಣಿಪಾಲ್‌ ಆಸ್ಪತ್ರೆಯಿಂದ ಲಸಿಕಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 5:44 IST
Last Updated 11 ಜನವರಿ 2022, 5:44 IST
ಮಣಿಪಾಲ್‌ ಆಸ್ಪತ್ರೆ ವತಿಯಿಂದ ಆಂಬುಲೆನ್ಸ್‌ಗಳ ಚಾಲಕರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಗಾಗಿ ವಿಶೇಷ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಮಣಿಪಾಲ್‌ ಆಸ್ಪತ್ರೆ ವತಿಯಿಂದ ಆಂಬುಲೆನ್ಸ್‌ಗಳ ಚಾಲಕರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಗಾಗಿ ವಿಶೇಷ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.   

ಬೆಂಗಳೂರು: ಮಣಿಪಾಲ್‌ ಆಸ್ಪತ್ರೆ ವತಿಯಿಂದ ಆಂಬುಲೆನ್ಸ್‌ಗಳ ಚಾಲಕರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಗಾಗಿ ವಿಶೇಷ ಲಸಿಕಾ ಅಭಿಯಾನವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಹಳೆಯ ವಿಮಾನ ನಿಲ್ದಾಣ ರಸ್ತೆ, ವೈಟ್‌ಫೀಲ್ಡ್‌, ಸರ್ಜಾಪುರ ರಸ್ತೆ, ಹೆಬ್ಬಾಳ, ವರ್ತೂರು ರಸ್ತೆ, ಮಲ್ಲೇಶ್ವರ, ಯಶವಂತಪುರ ಮತ್ತು ಜಯನಗರದಲ್ಲಿ ಮಣಿಪಾಲ್‌ ಆಸ್ಪತ್ರೆಗಳಲ್ಲಿ 100 ಆಂಬುಲೆನ್ಸ್‌ ಚಾಲಕರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಗೆ ಮುನ್ನೆಚ್ಚರಿಕೆ ಡೋಸ್‌ ನೀಡಲಾಯಿತು.

ವಾರಾಂತ್ಯ ಕರ್ಫ್ಯೂ ಬೇಡ: ಹೋಟೆಲುಗಳ ಸಂಘ
ಬೆಂಗಳೂರು: ‘ರಾಜಕೀಯ ಮುಖಂಡರಿಗೆ ಅನ್ವಯಿಸದ ಕೋವಿಡ್‌ ನಿಯಮಗಳು ಹೋಟೆಲ್‌ ಮಾಲೀಕರು ಮತ್ತು ಜನಸಾಮಾನ್ಯರಿಗೆ ಮಾತ್ರ ಅನ್ವಯಿಸುತ್ತದೆಯೇ? ಈ ತಾರತಮ್ಯದ ವಾರಾಂತ್ಯ ಕರ್ಫ್ಯೂ ಅನ್ನು ಕೂಡಲೇ ರದ್ದು ಮಾಡಿ’ ಎಂದು ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಆಗ್ರಹಿಸಿದ್ದಾರೆ.

ADVERTISEMENT

‘ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ, ಶೇ 50ರಷ್ಟು ಆಸನ ಸಾಮರ್ಥ್ಯದ ನಿಯಮಗಳು ಜನಸಾಮಾನ್ಯರು ಹಾಗೂ ದಿನಗೂಲಿ ನೌಕರರಿಗೆ ಮಾತ್ರ ಅನ್ವಯಿಸುತ್ತದೆ ಎನ್ನುವುದು ಭಾನುವಾರ ಆರಂಭವಾದ ರಾಜಕೀಯ ಮುಖಂಡರ ಮೆರವಣಿಗೆ ಹಾಗೂ ಕಾರ್ಯಕ್ರಮಗಳಿಂದ ಸಾಬೀತಾಗಿದೆ’ ಎಂದು ದೂರಿದ್ದಾರೆ.

‘ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ಸರ್ಕಾರದ ನೀತಿ ಖಂಡನೀಯ. ಕಾನೂನು ಮಾಡಿದರೆ ಎಲ್ಲರಿಗೂ ಸರಿಸಮಾನವಾಗಿರಬೇಕು. ಕಾನೂನಿನಿಂದ ತೊಂದರೆಯಾಗಿರುವುದು ಜನಸಾಮಾನ್ಯರು ಹಾಗೂ ಉದ್ದಿಮೆದಾರರಿಗೆ ಮಾತ್ರ. ಇಂತಹ ನಿಯಮಗಳನ್ನು ಜಾರಿ ಮಾಡುವುದು ಅರ್ಥಹೀನ. ವಾರಾಂತ್ಯದ ಕರ್ಫ್ಯೂ ರದ್ದು ಮಾಡುವುದೇ ಒಳ್ಳೆಯದು’ ಎಂದು ಹೇಳಿದ್ದಾರೆ.

ಜೆಎಸ್‌ಡಬ್ಲ್ಯು ಸ್ಟೀಲ್ಸ್‌ಗೆ ಹೊರ ಗುತ್ತಿಗೆ ನೌಕರರ ಪ್ರವೇಶ ನಿಷೇಧ
ಬಳ್ಳಾರಿ: ಜೆಎಸ್‌ಡಬ್ಲ್ಯು ಟೌನ್‌ಶಿಪ್‌ ಮತ್ತು ಸುತ್ತಮುತ್ತಲ ಪ್ರದೇಶ ಸೇರಿದಂತೆ ಸಂಡೂರು ತಾಲ್ಲೂಕಿನಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿರುವುದರಿಂದ ಜೆಎಸ್‌ಡಬ್ಲ್ಯು ಕಂಪನಿಗೆ ಹೊರ ರಾಜ್ಯಗಳಿಂದ ಬರುವ ಹೊರ ಗುತ್ತಿಗೆ ಕಾರ್ಮಿಕರ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಸೋಮವಾರ ರಾತ್ರಿ ಆದೇಶ ಹೊರಡಿಸಿದೆ.

ಸಂಡೂರು ತಾಲ್ಲೂಕು ಸೇರಿದಂತೆ ಜಿಲ್ಲೆಯ ಜನರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ತಕ್ಷಣದಿಂದಲೇ ಜೆಎಸ್‌ಡಬ್ಲ್ಯು ಆಡಳಿತ ಹೊರ ಗುತ್ತಿಗೆ ಕಾರ್ಮಿಕರ ಪ್ರವೇಶ ನಿಷೇಧಿಸುವಂತೆ ಜಿಲ್ಲಾಧಿಕಾರಿ ಪವನ್‌ ಕುಮಾರ್‌ ಮಾಲಪಾಟಿ ಈ ಆದೇಶದ‌ಲ್ಲಿ ತಿಳಿಸಿದ್ದಾರೆ. ಸೋಂಕು ವ್ಯಾಪಕವಾಗಿ ಹರಡಲು ಹೊರ ರಾಜ್ಯಗಳ ಹೊರ ಗುತ್ತಿಗೆ ಕಾರ್ಮಿಕರೇ ಕಾರಣ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.