ADVERTISEMENT

ಕೋವಿಡ್‌-19: ಹೋಮ್‌ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ ಮೂವರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 5:06 IST
Last Updated 2 ಜುಲೈ 2020, 5:06 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಹೋಮ್‌ ಕ್ವಾರಂಟೈನ್‌ ವಿಧಿಸಿದ್ದರೂ ನಿಯಮ ಉಲ್ಲಂಘಿಸಿ ಹೊರಗೆ ಅಡ್ಡಾಡಿದ ಮೂವರ ವಿರುದ್ಧ ಬೇಗೂರು ಪೊಲೀಸ್‌ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.

ಬಿಬಿಎಂಪಿ ಎಚ್‌ಎಸ್‌ಆರ್‌ ಉಪ ವಿಭಾಗದ ವ್ಯಾಪ್ತಿಗೆ ಬರುವ ಗಾರ್ವೇಬಾವಿ ಪಾಳ್ಯ ಶಂಕರನಾರಾಯಣ ರೆಸಿಡೆನ್ಸಿಯಲ್ಲಿ ನಿವಾಸಿ ಎಸ್‌.ಎಂ. ಕೃಷ್ಣ ಎಂಬುವರಿಗೆ ಜೂನ್‌ 25ರಿಂದ ಜುಲೈ 2ರವರೆಗೆ ಹೋಮ್‌ ಕ್ವಾರಂಟೈನ್‌ ವಿಧಿಸಲಾಗಿತ್ತು. ಅದನ್ನು ಉಲ್ಲಂಘಿಸಿ ಅವರು ಹೊರಗೆ ಓಡಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರು ವಾಟ್ಸ್‌ಆ್ಯಪ್‌ ಮೂಲಕ ದೂರು ನೀಡಿದ್ದರು. ಪರಿಶೀಲನೆ ನಡೆಸಲು ಬಿಬಿಎಂಪಿ ಅಧಿಕಾರಿ ಬಂದಾಗ ಕೃಷ್ಣ ಅವರು ತಮ್ಮ ಮನೆಯಲ್ಲಿ ಇರಲಿಲ್ಲ. ಹೀಗಾಗಿ, ಬೇಗೂರು ಠಾಣೆಗೆ ತೆರಳಿ ದೂರು ನೀಡಿದ್ದರು.

ಅದೇ ರೀತಿ ಹೋಮ್‌ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ ಹೊಸಪಾಳ್ಯದ ನಿವಾಸಿ ಚಕ್ರಧರ ಮತ್ತು ಕೂಡ್ಲುಗೇಟ್‌ ನೋವೆಲ್‌ ಪಾರ್ಕ್ ನಿವಾಸಿ ಗೌತಮ್‌ ಎಂಬವರ ವಿರುದ್ಧವೂ ಕ್ರಿಮಿನಲ್‌ ಪ್ರಕರಣ ದಾಖಲಾಗಿವೆ.

ADVERTISEMENT

ನಗರದಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್‌ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಲಾಗಿದೆ. ಮಾಸ್ಕ್ ಧರಿಸದೆ ಹೊರಗಡೆ ಬಂದರೆ ಅಂಥವರ ವಿರುದ್ಧವೂ ದೂರು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.