ಬೆಂಗಳೂರು: ಹೋಟೆಲ್ ಸ್ವಾಗತಕಾರ ಕೆಲಸದಿಂದ ತೆಗೆದಿದ್ದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾದ ಆರೋಪಿ ಅಮೀರ್ ಅಹಮ್ಮದ್ (28) ಎಂಬಾತನನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.
‘ಅಗ್ರಹಾರ ಬಡಾವಣೆಯ ತಿರುಮಲಹಳ್ಳಿ ಮುಖ್ಯರಸ್ತೆ ನಿವಾಸಿಯಾದ ಅಮೀರ್, ಲಾಕ್ಡೌನ್ನಿಂದಾಗಿ ಕೆಲಸ ಕಳೆದುಕೊಂಡಿದ್ದ. ನಂತರ ಹೆಚ್ಚಿನ ಹಣ ಸಂಪಾದನೆಗಾಗಿ ಗಾಂಜಾ ಮಾರಾಟ ಮಾಡಲಾರಂಭಿಸಿದ್ದ’ ಎಂದು ಪೊಲೀಸರು ಹೇಳಿದರು.
‘ಬ್ಯಾಗ್ಗಳಲ್ಲಿ ಗಾಂಜಾ ಪೊಟ್ಟಣಗಳನ್ನು ತುಂಬಿಕೊಂಡು ಬಂದಿದ್ದ ಆರೋಪಿ, ಪೀಣ್ಯ 2ನೇ ಹಂತದಲ್ಲಿ ಕಾಣಿಸಿಕೊಂಡಿದ್ದ. ಆತನ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ದಾಳಿ ಮಾಡಿ ಬಂಧಿಸಲಾಯಿತು. 20 ಕೆ.ಜಿ ಗಾಂಜಾ ಹಾಗೂ 30 ಸಾವಿರ ನಗದು ಜಪ್ತಿ ಮಾಡಲಾಯಿತು’ ಎಂದೂ ತಿಳಿಸಿದರು.
‘ಪರಿಚಯಸ್ಥರೊಬ್ಬರ ಮೂಲಕ ಆಂಧ್ರಪ್ರದೇಶದಿಂದ ಗಾಂಜಾ ತರುತ್ತಿದ್ದ ಆರೋಪಿ, ನಗರದಲ್ಲಿ ಕೆಲ ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಆತ ತಪ್ಪೊಪ್ಪಿಕೊಂಡಿದ್ದಾನೆ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.