ಬೆಂಗಳೂರು: ನಿಗದಿತ ಗುರುತಿನ ಚೀಟಿಗಳು ಇಲ್ಲದವರಿಗೂ ಕೋವಿಡ್ ಲಸಿಕೆ ಒದಗಿಸಲಾಗುತ್ತದೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ತಿಳಿಸಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
‘ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಪ್ಯಾನ್ ಕಾರ್ಡ್, ವಾಹನ ಚಾಲನಾ ಪರವಾನಗಿ, ಎನ್.ಪಿ.ಆರ್. ಸ್ಮಾರ್ಟ್ ಕಾರ್ಡ್ ಅಥವಾ ಪಿಂಚಣಿ ದಾಖಲಾತಿಯನ್ನು ಲಸಿಕೆ ಪಡೆಯಲು ಒದಗಿಸಬೇಕಿದೆ. ಈ ದಾಖಲಾತಿ ಇಲ್ಲದವರಿಗೆ ಲಸಿಕೆ ಒದಗಿಸಲು ಅವಕಾಶ ನೀಡಲಾಗಿದ್ದು, ನಿಯಮಿತ ಕಾರ್ಯಾಚರಣಾ ವಿಧಾನವನ್ನು ರೂಪಿಸಲಾಗಿದೆ’ ಎಂದು ಹೇಳಿದ್ದಾರೆ.
‘ಗುರುತಿನ ಚೀಟಿ ಇಲ್ಲದ ಫಲಾನುಭವಿಗಳನ್ನು ಗುರುತಿಸಿ, ಲಸಿಕೆ ಒದಗಿಸಬೇಕು. ಅದೇ ರೀತಿ, ಹಿಮೋಫಿಲಿಯಾ ಸಮಸ್ಯೆ ಎದುರಿಸುತ್ತಿರುವವರನ್ನು ದುರ್ಬಲ ಗುಂಪಿಗೆ ಸೇರ್ಪಡೆ ಮಾಡಿ, ಲಸಿಕೆ ನೀಡಲು ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.