ಬೆಂಗಳೂರು: ಕೋವಿಡ್ ಲಸಿಕೆ ನೀಡುವ ನೆಪದಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ದುಷ್ಕರ್ಮಿಗಳ ತಂಡ, ಪಿಸ್ತೂಲ್ ತೋರಿಸಿ ಮಹಿಳೆಯರಿಬ್ಬರನ್ನು ಬೆದರಿಸಿ 50 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದೆ.
ಯಶವಂತಪುರ ಬಳಿಯ ಬೃಂದಾವನ ನಗರದ 6ನೇ ಅಡ್ಡರಸ್ತೆಯಲ್ಲಿರುವ ಸಂಪತ್ ಸಿಂಗ್ ಎಂಬುವರ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಸಂಪತ್ ಸಿಂಗ್ ಕೆಲಸ ನಿಮಿತ್ತ ಹೊರಗಡೆ ಹೋಗಿದ್ದರು. ಅವರ ಪತ್ನಿ ಪಿಸ್ತಾದೇವಿ ಹಾಗೂ ಸೊಸೆ ರಕ್ಷಾ ಮಾತ್ರ ಮನೆಯಲ್ಲಿದ್ದರು. ಕಾರಿನಲ್ಲಿ ಬೆಳಿಗ್ಗೆ 11.30ರ ಸುಮಾರಿಗೆ ಆರೋಪಿಗಳು ಮನೆ ಬಳಿ ಬಂದಿದ್ದರು. ವೈದ್ಯರ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ, ಮನೆ ಬಳಿ ಹೋಗಿ ಬಾಗಿಲು ಬಡಿದಿದ್ದ’ ಎಂದು ಯಶವಂತಪುರ ಠಾಣೆ ಪೊಲೀಸ್ ಮೂಲಗಳು ಹೇಳಿವೆ.
‘ಬಾಗಿಲು ತೆರೆದಿದ್ದ ಮಹಿಳೆಯರ ಜೊತೆ ಮಾತನಾಡಿದ್ದ ಆರೋಪಿ, ‘ನಾನು ಆರೋಗ್ಯ ಇಲಾಖೆ ವೈದ್ಯ. ಕೋವಿಡ್ನ ಓಮೈಕ್ರಾನ್ ರೂಪಾಂತರಿ ತಳಿ ಎಲ್ಲೆಡೆ ಹರಡುತ್ತಿದೆ. ಅದರ ನಿಯಂತ್ರಣಕ್ಕಾಗಿ ಜನರಿಗೆ ಲಸಿಕೆ ಹಾಕುತ್ತಿದ್ದೇವೆ. ನಿಮಗೂ ಲಸಿಕೆ ನೀಡುತ್ತೇವೆ’ ಎಂದಿದ್ದ.’
‘ಆರೋಪಿ ಬಗ್ಗೆ ಅನುಮಾನಗೊಂಡಿದ್ದ ಪಿಸ್ತಾದೇವಿ, ಪತಿಗೆ ಕರೆ ಮಾಡಲು ಯತ್ನಿಸಿದ್ದರು. ಮೊಬೈಲ್ ಕಸಿದುಕೊಂಡಿದ್ದ ಆರೋಪಿ, ಪಿಸ್ತಾದೇವಿ ಹಣೆಗೆ ಪಿಸ್ತೂಲ್ ಹಿಡಿದಿದ್ದ. ಇತರೆ ಆರೋಪಿಗಳೂ ಮನೆಯೊಳಗೆ ಬಂದಿದ್ದರು. ಇಬ್ಬರ ಮಹಿಳೆಯರನ್ನು ಬೆದರಿಸಿ, ಅವರ ಚಿನ್ನಾಭರಣ ಕಿತ್ತುಕೊಂಡಿದ್ದರು. ಇದೇ ಸಂದರ್ಭದಲ್ಲೇ ಸಂಪತ್ ಸಿಂಗ್ ಅವರ ಮಗ ವಿಕ್ರಂ ಮನೆಗೆ ಬಂದಿದ್ದ. ಆತನನ್ನು ನೋಡಿ ಆರೋಪಿಗಳು ಓಡಿ ಹೋಗಿದ್ದಾರೆ’ ಎಂದೂ ಪೊಲೀಸ್ ಮೂಲಗಳು ವಿವರಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.