ADVERTISEMENT

ಮತಾಂತರ ನಿಷೇಧ ಮಸೂದೆ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 19:31 IST
Last Updated 22 ಡಿಸೆಂಬರ್ 2021, 19:31 IST
ಬೊಮ್ಮನಹಳ್ಳಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಸಿಪಿಐ(ಎಂ) ಕಾರ್ಯಕರ್ತರು
ಬೊಮ್ಮನಹಳ್ಳಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಸಿಪಿಐ(ಎಂ) ಕಾರ್ಯಕರ್ತರು   

ಬೊಮ್ಮನಹಳ್ಳಿ: ವ್ಯಕ್ತಿಯ ಮೂಲಭೂತ ಹಕ್ಕು ಕಸಿಯಲಿರುವ ಮತಾಂತರ ನಿಷೇಧ ಮಸೂದೆ ವಾಪಸ್ ಪಡೆಯಲು ಆಗ್ರಹಿಸಿ ಸಿಪಿಐ(ಎಂ) ಕಾರ್ಯಕರ್ತರು ಬುಧವಾರ ಬೊಮ್ಮನಹಳ್ಳಿ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

‘ಬಲತ್ಕಾರ ಮತ್ತು ಆಮಿಷದ ಮತಾಂತರವನ್ನು ತಡೆಯುವ ಉದ್ದೇಶದಿಂದ ಕಾಯ್ದೆ ತರಲಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆಯಾದರೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಕರಾಳ ಕಟ್ಟಳೆಗಳನ್ನು ರೂಪಿಸಲಾಗಿದೆ. ಸಂಘ ಪರಿವಾರದ ಗೂಂಡಾಪಡೆಗೆ ಕಾನೂನಿನ ಕುಣಿಕೆಯನ್ನು ನೀಡಿ, ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸುವುದೇ ಈ ಕಾಯ್ದೆ ಜಾರಿಯ ಉದ್ದೇಶ’ ಎಂದು ಪ್ರತಿಭಟನಾಕಾರರು ದೂರಿದರು.

ಸಿಪಿಐ(ಎಂ) ರಾಜ್ಯ ಮುಖಂಡ ಡಾ.ಕೆ.ಪ್ರಕಾಶ್ ಮಾತನಾಡಿ, ‘ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿರುವ ಈ ಮಸೂದೆಯು, ಸಂವಿಧಾನ ಬದಲಿಸುವ ಬಿಜೆಪಿಯ ರಹಸ್ಯ ಕಾರ್ಯಸೂಚಿಯ ಭಾಗವಾಗಿದೆ’ ಎಂದರು. ‘ಅಂತರ್ಜಾತಿ ಹಾಗೂ ಅಂತರ್ ಧರ್ಮೀಯ ವಿವಾಹಗಳನ್ನು ತಡೆಯುವ ದುರುದ್ದೇಶ ಹೊಂದಲಾಗಿದ್ದು, ಮಸೂದೆಯು ಮಾನವ ಹಕ್ಕುಗಳನ್ನು ನಿರಾಕರಿಸುವ ಅಪಾಯಕಾರಿ ಅಂಶಗಳನ್ನು ಒಳಗೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸಿಪಿಐ(ಎಂ) ಬೊಮ್ಮನಹಳ್ಳಿ ವಲಯದ ಮುಖಂಡರಾದ ಎನ್.ದಯಾನಂದ್, ಪಿ.ಕೆ.ನಿತಿನ್, ಮಾಧು, ಸಂತೋಷ್, ಸುಬ್ರಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.