ಬೆಂಗಳೂರು: ತನಗೆ ಮದ್ಯ ಕೊಡಿಸಲಿಲ್ಲವೆಂದು ಸ್ನೇಹಿತನ ಹೆಬ್ಬೆರಳನ್ನೇ ಕತ್ತರಿಸಿದ ಭೂಪ ಇದೀಗ ಕೋಣನಕುಂಟೆ ಪೊಲೀಸರ ಅತಿಥಿಯಾಗಿದ್ದಾನೆ.
ಕೊತ್ತನೂರು ದಿಣ್ಣೆ ನಿವಾಸಿ ಎಸ್.ಕುಮಾರ್ (30) ಬೆರಳು ಕಳೆದುಕೊಂಡವರು. ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಕೊತ್ತನೂರು ರಸ್ತೆಯ ‘ಲಕ್ಷ್ಮಿ ಬಾರ್’ಗೆ ಹೋಗಿದ್ದ ಅವರು, ಪಾನಮತ್ತರಾಗಿ ಮನೆಗೆ ವಾಪಸಾಗುತ್ತಿದ್ದರು.
ಈ ವೇಳೆ ಎದುರಾದ ಸ್ನೇಹಿತ ಗಣೇಶ್ ಅಲಿಯಾಸ್ ಗಣಿ, ತನಗೂ ಮದ್ಯಪಾನ ಮಾಡಿಸುವಂತೆ ಪೀಡಿಸಿದ್ದಾನೆ. ‘ನನ್ನ ಬಳಿ ಹಣವಿಲ್ಲ’ ಎಂದು ಕುಮಾರ್ ಹೇಳಿದ್ದರಿಂದ ಕುಪಿತಗೊಂಡ ಆತ, ಗಲಾಟೆ ಪ್ರಾರಂಭಿಸಿ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ. ಸ್ಥಳೀಯರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ.
ಕೊತ್ತನೂರು ರಸ್ತೆಯ ಚಿತ್ತೂರು ಬೇಕರಿ ಬಳಿ ಪುನಃ ಗೆಳೆಯನನ್ನು ಅಡ್ಡಗಟ್ಟಿದ ಗಣೇಶ್, ‘ನನಗೇ ಎಣ್ಣೆ ಕೊಡಿಸಲ್ಲ ಎನ್ನುತ್ತೀಯಾ ಎಂದು ಚಾಕು ಬೀಸಿದ್ದಾನೆ. ಕುಮಾರ್ ಬಲಗೈ ಅಡ್ಡ ಕೊಟ್ಟಾಗ ಹೆಬ್ಬೆರಳು ತುಂಡಾಗಿದೆ. ಇದೇ ವೇಳೆ ಅವರ ಸ್ನೇಹಿತ ಮಣಿ ರಕ್ಷಣೆಗೆ ಧಾವಿಸಿದ್ದು, ಆರೋಪಿ ಅವರ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ಕೋಣನಕುಂಟೆ ಪೊಲೀಸರು ಹೇಳಿದ್ದಾರೆ.
ಸ್ಥಳೀಯರು ಕೂಡಲೇ ಇಬ್ಬರನ್ನೂ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಮಾರ್ ಹೇಳಿಕೆ ಪಡೆದು ತನಿಖೆ ಪ್ರಾರಂಭಿಸಿದ ಪೊಲೀಸರು, ಸ್ನೇಹಿತನ ಮನೆಯಲ್ಲಿ ಅಡಗಿದ್ದ ಗಣೇಶ್ನನ್ನು ವಶಕ್ಕೆ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.