ADVERTISEMENT

ವೇತನ ಹೆಚ್ಚಳ ಮಾಡದ ಕಾರಣಕ್ಕೆ ಕಾರ್ಮಿಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 21:34 IST
Last Updated 11 ಮಾರ್ಚ್ 2021, 21:34 IST
ಶಾಂತಕುಮಾರ್
ಶಾಂತಕುಮಾರ್   

ಯಲಹಂಕ: ಸಂಬಳ ಹೆಚ್ಚಳ ಮಾಡದಿದ್ದರಿಂದ ನೊಂದಿದ್ದರು ಎನ್ನಲಾದ ಶಾಂತಕುಮಾರ್ (27) ಎಂಬುವರು, ತಾವು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತದೇಹವಿದ್ದ ಸ್ಥಳದಲ್ಲಿ ಮರಣ ಪತ್ರ ಸಿಕ್ಕಿದ್ದು, ಅದನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ದಾವಣಗೆರೆ ಜಿಲ್ಲೆಯ ಶಾಂತಕುಮಾರ್, ಚಿಕ್ಕಜಾಲದ ಸೋಲಾರ್ ಕಂಪನಿಯೊಂದರಲ್ಲಿ ಸ್ಟೋರ್ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ ಕಂಪನಿಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ADVERTISEMENT

ಮೃತದೇಹ ನೋಡಿದ್ದ ಕಂಪನಿ ಸಿಬ್ಬಂದಿ ಠಾಣೆಗೆ ಮಾಹಿತಿ ನೀಡಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಾಲ್ಕು ವರ್ಷಗಳಿಂದ ಕಂಪನಿಯವರು ಸಂಬಳ ಹೆಚ್ಚಳ ಮಾಡಿರಲಿಲ್ಲ. ಅದರಿಂದಾಗಿ ಶಾಂತಕುಮಾರ್, ಆರ್ಥಿಕವಾಗಿ ಕಷ್ಟಕ್ಕೆ ಸಿಲುಕಿದ್ದರು. ಮನೆ ನಡೆಸುವುದೂ ಕಷ್ಟವಾಗಿತ್ತು. ಅದರಿಂದ ಅವರು ನೊಂದಿದ್ದರು. ಈ ಸಂಗತಿಯನ್ನೇ ಅವರು ಮರಣಪತ್ರದಲ್ಲಿ ಬರೆದಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಪ್ರತಿಭಟನೆ: ವಿಷಯ ತಿಳಿಯುತ್ತಿದ್ದಂತೆ ಕಾರ್ಖಾನೆಯ ಮುಂಭಾಗದಲ್ಲಿ ಜಮಾಯಿಸಿದ ಕಾರ್ಮಿಕರು, ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ಆರಂಭಿಸಿದರು.

ಕಂಪನಿಯಲ್ಲಿ ಸುಮಾರು 130 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಆಡಳಿತ ಮಂಡಳಿಯು ಕಳೆದ 5 ವರ್ಷಗಳಿಂದಲೂ ವೇತನ ಹೆಚ್ಚಳ ಮಾಡಿಲ್ಲ. ಹಲವು ಸಲ ಮನವಿ ಮಾಡಿದರೂ ಕಾರ್ಮಿಕರ ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸದೆ ಕಡೆಗಣಿಸಿದೆ.

ಈ ಬಗ್ಗೆ ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಿದ್ದು, ಇನ್ನೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ದೂರಿದರು.

ಆಡಳಿತ ಮಂಡಳಿಯು ಕಾಲಕಾಲಕ್ಕೆ ವೇತನ ಹೆಚ್ಚಳ ಮಾಡದೆ ನೌಕರರ ವಿಚಾರದಲ್ಲಿ ನಿರ್ಲಕ್ಷ್ಯದೋರಣೆ ಅನುಸರಿಸಿರುವುದರ ಪರಿಣಾಮ, ಶಾಂತಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಈ ಬಗ್ಗೆ ತನಿಖೆನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮ ಕೈಗೊಳ್ಳುವುದರ ಜೊತೆಗೆ ಮೃತ ಶಾಂತಕುಮಾರ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.