ಬೆಂಗಳೂರು: ಯಲಹಂಕದಲ್ಲಿರುವ ಪ್ರಾಣಿಗಳ ರಕ್ಷಣೆ ಹಾಗೂ ಪುನರ್ವಸತಿ ಸಂಸ್ಥೆಯಿಂದ ನಾಯಿಮರಿ ದತ್ತು ಪಡೆಯಲು ಪ್ರಯತ್ನಿಸಿದ ವ್ಯಕ್ತಿಯೊಬ್ಬರು ಸೈಬರ್ ಕಳ್ಳರ ಬಲೆಗೆ ಬಿದ್ದು, ₹ 40 ಸಾವಿರ ಕಳೆದುಕೊಂಡಿದ್ದಾರೆ.
ಈ ಕುರಿತು ಪ್ರಮೋದ್ ಕುಮಾರ್ ಎಂಬುವವರು ವೈಟ್ಫೀಲ್ಡ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಎಫ್ಐಆರ್
ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಾಯಿ ಮರಿ ದತ್ತು ಪಡೆಯಲು ಪ್ರಮೋದ್ ಕುಮಾರ್ ಅವರು ಪುನರ್ವಸತಿ ಸಂಸ್ಥೆಯ ಸಂಪರ್ಕ ಸಂಖ್ಯೆ ಪಡೆಯಲು ಗೂಗಲ್ ಸರ್ಚ್ ಮಾಡಿದಾಗ ಒಂದು ಸಂಖ್ಯೆ ಸಿಕ್ಕಿದೆ.
ಅದಕ್ಕೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿ, ಸಂಸ್ಥೆಯ ಮಾಲೀಕರನ್ನು ಭೇಟಿಯಾಗಬೇಕಾದರೆ ₹10 ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು ಎಂದು ತಿಳಿಸಿದ್ದಾನೆ.
ಬಳಿಕ ಅವರ ಮೊಬೈಲ್ಗೆ ಮೂರು ಸಂದೇಶಗಳನ್ನೂ ಕಳುಹಿಸಿದ್ದಾನೆ. ಆ ಸಂದೇಶಗಳಲ್ಲಿ ಇದ್ದ ಲಿಂಕ್ನ್ನು ಪ್ರಮೋದ್ ಕ್ಲಿಕ್ ಮಾಡಿದ ಐದು ನಿಮಿಷಗಳಲ್ಲೇ ಖಾತೆಯಿಂದ ₹ 40 ಸಾವಿರ ಕಡಿತಗೊಂಡಿರುವ ಬಗ್ಗೆ ಸಂದೇಶ ಬಂದಿದೆ.ಸಂದೇಶ ಬಂದ ನಂಬರ್ಗೆ ಮತ್ತೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ದೂರಿನಲ್ಲಿ ಪ್ರಮೋದ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.