ADVERTISEMENT

ರೈತರ ಖಾತೆಗೆ ‘ಸೈಬರ್‌’ ಕನ್ನ

‘ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ’ ಪಡೆಯುವ ರೈತರಿಗೆ ಎಪಿಕೆ ಫೈಲ್ ಕಳುಹಿಸಿ ವಂಚನೆ

ಆದಿತ್ಯ ಕೆ.ಎ
Published 27 ಸೆಪ್ಟೆಂಬರ್ 2025, 0:30 IST
Last Updated 27 ಸೆಪ್ಟೆಂಬರ್ 2025, 0:30 IST
<div class="paragraphs"><p>ಸೈಬರ್</p></div>

ಸೈಬರ್

   

ಬೆಂಗಳೂರು: ಸೈಬರ್‌ ವಂಚಕರು ಹಣ ದೋಚಲು ದಿನಕ್ಕೊಂದು ತಂತ್ರ ರೂಪಿಸುತ್ತಿದ್ದು, ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ರೈತರ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕಲು ಆರಂಭಿಸಿದ್ದಾರೆ.

ಕೇಂದ್ರ ಸರ್ಕಾರದ ‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್ ನಿಧಿ’ ಪಡೆಯುವ ರೈತರ ವಾಟ್ಸ್‌ಆ್ಯಪ್‌ಗೆ ಸೈಬರ್‌ ಕಳ್ಳರು ‘ಎಪಿಕೆ ಕುತಂತ್ರಾಂಶ’ ಕಳುಹಿಸಿ, ಬ್ಯಾಂಕ್‌ ಖಾತೆಯಲ್ಲಿದ್ದ ಹಣವನ್ನೂ ಖಾಲಿ ಮಾಡುತ್ತಿದ್ದಾರೆ. 

ADVERTISEMENT

ವಾಟ್ಸ್‌ಆ್ಯಪ್‌ಗೆ ಬಂದ ಎಪಿಕೆ ಫೈಲ್‌ಗಳನ್ನು ತೆರೆದು ಹಣ ಕಳೆದುಕೊಂಡ ಕೃಷಿಕರು, ತಮ್ಮ ವ್ಯಾಪ್ತಿಯ ಸೈಬರ್ ಅಪರಾಧ ಠಾಣೆಗಳಲ್ಲಿ ದೂರು ನೀಡುತ್ತಿದ್ದಾರೆ. ರಾಜ್ಯದ ವಿವಿಧ ಸೈಬರ್ ಅಪರಾಧ ಠಾಣೆಗಳಲ್ಲಿ ಈ ರೀತಿಯ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಹೇಳಿವೆ.

ವಾರಾಣಸಿಯಲ್ಲಿ ಆಗಸ್ಟ್‌ ತಿಂಗಳಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಪಿಎಂ ಕಿಸಾನ್‌’ ಯೋಜನೆಯ 20ನೇ ಕಂತಿನ ಹಣ ಬಿಡುಗಡೆ ಮಾಡಿದ್ದರು. ಹಣ ಬಿಡುಗಡೆಯಾದ ಬಳಿಕ ರೈತರ ಬ್ಯಾಂಕ್‌ ಖಾತೆಗಳಿಗೆ ಹಣ ಜಮೆ ಮಾಡಲಾಗುತ್ತಿದ್ದು, ಇದೇ ಸಂದರ್ಭದಲ್ಲಿ ಸಕ್ರಿಯಗೊಂಡಿರುವ ವಂಚಕರು ಕೃಷಿಕರ ಖಾತೆಯಿಂದ ಹಣ ದೋಚುತ್ತಿದ್ದಾರೆ.

ಕಿಸಾನ್ ಸಮ್ಮಾನ್‌ ನಿಧಿಗೆ ಹೆಸರು ನೋಂದಣಿ ಮಾಡಿಕೊಂಡಿರುವ ರೈತರನ್ನು ಪತ್ತೆ ಹಚ್ಚುತ್ತಿರುವ ಕಳ್ಳರು, ಅವರ ವಾಟ್ಸ್‌ಆ್ಯಪ್‌ಗೆ ‘ಪಿಎಂ ಕಿಸಾನ್‌ ಎಪಿಕೆ ಫೈಲ್‌’ ರವಾನೆ ಮಾಡುತ್ತಿದ್ದಾರೆ. ಎಪಿಕೆ ಫೈಲ್‌ ತೆರೆದವರು ಹಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು. 

ಹಣಕಾಸು ಹಾಗೂ ವೈಯಕ್ತಿಕ ವಿವರದ ದತ್ತಾಂಶ ಕಳವು ಮಾಡಲು ನೆರವಾಗುವಂತೆ ಈ ಕುತಂತ್ರಾಂಶ ರೂಪಿಸಲಾಗಿದೆ. 

‘ಈ ಹಿಂದೆಯೂ ವಿವಿಧ ಬ್ಯಾಂಕ್‌ಗಳ ಹೆಸರಿನಲ್ಲಿ ಸೈಬರ್‌ ಕಳ್ಳರು ಎಪಿಕೆ ಫೈಲ್‌ಗಳನ್ನು ಕಳುಹಿಸಿ, ಕೆವೈಸಿ ಅಪ್‌ಡೇಟ್ ಮಾಡಿಕೊಳ್ಳುವಂತೆ ಗ್ರಾಹಕರಿಗೆ ಸೂಚಿಸುತ್ತಿದ್ದರು. ಆ ಫೈಲ್ ತೆರೆದ ಮೇಲೆ ಯಾವುದೇ ಅನುಮತಿಯಿಲ್ಲದೇ ಕುತಂತ್ರಾಂಶ ಮೊಬೈಲ್‌ಗೆ ಸೇರ್ಪಡೆ ಆಗುತ್ತಿತ್ತು. ಮೊಬೈಲ್‌ನಲ್ಲಿರುವ ವೈಯಕ್ತಿಕ ಮಾಹಿತಿ, ಬ್ಯಾಂಕ್ ವಿವರ, ಪಾಸ್‌ವರ್ಡ್, ಒಟಿಪಿ ಪಡೆದುಕೊಳ್ಳುತ್ತಿದ್ದರು. ಇದಕ್ಕೆ ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ವಂಚಕರು ಬಳಸುತ್ತಿದ್ದರು. ಆದರೆ, ಇದೀಗ ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನೇ ಗುರಿಯಾಗಿಸಿ ಕೃತ್ಯ ಎಸಗುತ್ತಿದ್ದಾರೆ. ತಮ್ಮ ಖಾತೆಗೆ ಪಿಎಂ ಕಿಸಾನ್‌, ಗೃಹಲಕ್ಷ್ಮಿ ಸೇರಿ ಬೇರೆ ಬೇರೆ ಯೋಜನೆಗಳ ಹಣ ಬಂದಿದೆ. ವಾಟ್ಸ್‌ಆ್ಯಪ್‌ಗೆ ಬಂದಿರುವ ಫೈಲ್‌ ಮೇಲೆ ಕ್ಲಿಕ್ ಮಾಡುವಂತೆ ಸೂಚಿಸುತ್ತಿದ್ದಾರೆ’ ಎಂದು ಮೂಲಗಳು ಹೇಳಿವೆ.

ಕಿಸಾನ್ ಸಮ್ಮಾನ್‌ ನಿಧಿ ಯೋಜನೆ ಮಾರ್ಗಸೂಚಿ ಅನ್ವಯ ಅರ್ಹ ಸದಸ್ಯರಿಗೆ ₹2 ಸಾವಿರದಂತೆ ಮೂರು ಕಂತುಗಳಲ್ಲಿ ವಾರ್ಷಿಕವಾಗಿ ₹6 ಸಾವಿರ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಇಂತಹ ಅರ್ಹ ರೈತರಿಗೆ ರಾಜ್ಯ ಸರ್ಕಾರದಿಂದಲೂ ವಾರ್ಷಿಕವಾಗಿ ಎರಡು ಕಂತುಗಳಲ್ಲಿ ₹4 ಸಾವಿರ ಲಭಿಸುತ್ತಿದೆ.

ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು, ವಾಟ್ಸ್‌ಆ್ಯಪ್‌ ಬಳಸುವ ಕೃಷಿಕರ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಬ್ಯಾಂಕ್‌ ಹಾಗೂ ಇಲಾಖೆಯ ಅಧಿಕಾರಿಗಳ ಸೋಗಿನಲ್ಲಿ ಸೈಬರ್ ಕಳ್ಳರು ರೈತರಿಗೆ ಕರೆ ಮಾಡಿ ವೈಯಕ್ತಿಕ ಮಾಹಿತಿ ಕೇಳುತ್ತಿದ್ದಾರೆ. ಮಾಹಿತಿ ನೀಡಿದ ಕೃಷಿಕರ ಬ್ಯಾಂಕ್ ಖಾತೆಯಲ್ಲಿದ್ದ ಹಣ ಖಾಲಿ ಆಗುತ್ತಿದೆ. ಆದ್ದರಿಂದ, ರೈತರು ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. 

‘ಇಕೆಐಸಿ, ಹೊಸದಾಗಿ ಹೆಸರು ನೋಂದಣಿ, ಮೊಬೈಲ್‌ ಸಂಖ್ಯೆ ಅಪ್‌ಡೇಟ್‌ ಮಾಡುವುದಾಗಿ ಹೇಳಿ ಕರೆಗಳು ಬರುತ್ತಿವೆ.  ಮಾಹಿತಿ ನೀಡಬಾರದು. ಇಲಾಖೆಯ ಕಚೇರಿಗೇ ತೆರಳಿ ವಿಚಾರಣೆ ನಡೆಸಬೇಕು’ ಎಂದು ಮೂಲಗಳು ಹೇಳಿವೆ.

‘ನಿಮ್ಮ ಮನೆಯನ್ನು ನವೀಕರಿಸಲು ವೈಯಕ್ತಿಕ ಸಾಲ ನೀಡಲಾಗುವುದು. ತಕ್ಷಣವೇ ₹10 ಲಕ್ಷ ನೀಡುತ್ತೇವೆ. ಈಗಲೇ ಅರ್ಜಿ ಸಲ್ಲಿಸಿ. ನಿಮ್ಮ ಖಾತೆಗೆ ಮರು ಕೆವೈಸಿ ಇದೆ ಎಂಬ ಸಂದೇಶಗಳು ಇತ್ತೀಚೆಗೆ ಬರಲು ಆರಂಭಿಸಿವೆ. ಅಂತಹ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬಾರದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.


ಏಳು ತಿಂಗಳಲ್ಲಿ 8620 ಪ್ರಕರಣ

ರಾಜ್ಯದಲ್ಲಿ ಆನ್‌ಲೈನ್‌ ವಂಚನೆ ಪ್ರಕರಣಗಳು ಕಡಿಮೆ ಆಗಿಲ್ಲ. ಕಳೆದ ಏಳು ತಿಂಗಳಲ್ಲಿ 8620 ಪ್ರಕರಣಗಳು ದಾಖಲಾಗಿವೆ (ಜನವರಿಯಿಂದ ಜುಲೈ ಅಂತ್ಯದವರೆಗೆ). ಈ ಪೈಕಿ ಬೆಂಗಳೂರು ನಗರದಲ್ಲಿಯೇ 6311 ಪ್ರಕರಣ ಗಳು ದಾಖಲಾಗಿವೆ. ಬೆಂಗಳೂರು ಗ್ರಾಮಾಂತರ ಮೈಸೂರು ವಿಜಯಪುರ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಹೆಚ್ಚಿನ ವಂಚನೆ ಪ್ರಕರಣಗಳು ವರದಿ ಆಗುತ್ತಿವೆ. ರಾಜ್ಯದಲ್ಲಿ 2023ರಲ್ಲಿ 22253 ಪ್ರಕರಣಗಳು 2024ರಲ್ಲಿ 22472 ಸೈಬರ್ ಪ್ರಕರಣಗಳು ದಾಖಲಾಗಿದ್ದವು.

ಎಪಿಕೆ ಅಪಾಯ: ಇರಲಿ ಎಚ್ಚರ 

*ಎಪಿಕೆ ಫೈಲ್‌ ಡೌನ್‌ಲೋಡ್ ಮಾಡಿಕೊಂಡರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಎಪಿಕೆ ಫೈಲ್‌ ಬಂದ ತಕ್ಷಣವೇ ಡಿಲಿಟ್ ಮಾಡಬೇಕು

*ಅನಾಮಧೇಯ ಕರೆಗಳು ಬಂದಾಗ ತಾಳ್ಮೆಯಿಂದ ಪ್ರತಿಕ್ರಿಯಿಸಬೇಕು. ಕನ್ನಡದಲ್ಲೇ ಮಾತನಾಡಿದರೆ ಅನಾಹುತ ಕಡಿಮೆ

*ಫಲಾನುಭವಿಗಳು ಸರ್ಕಾರಿ ಇಲಾಖೆಗೇ ತೆರಳಿ ಸಂಬಂಧಿಸಿದ ಯೋಜನೆಗಳ ಮಾಹಿತಿ ಪಡೆದುಕೊಳ್ಳಬೇಕು

*ಮೊಬೈಲ್‌ ಫೋನ್ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ವೈಯಕ್ತಿಕ ಮಾಹಿತಿ ಬ್ಯಾಂಕ್ ಖಾತೆಯ ವಿವರ ಹಂಚಿಕೊಳ್ಳಬಾರದು

*ಆನ್‌ಲೈನ್ ವಂಚನೆಯ ಅನುಮಾನ ಬಂದರೆ 1930ಕ್ಕೆ (ಸೈಬರ್ ಸಹಾಯವಾಣಿ) ಕರೆ ಮಾಡಿ ಮಾಹಿತಿ ನೀಡಬೇಕು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.