ADVERTISEMENT

ಇಲ್ಲಿ ಕೆರೆಯಂಗಳಕ್ಕೆ ತ್ಯಾಜ್ಯದ ‘ಹರಿವು’

ದಾಬಸ್‌ಪೇಟೆ ಸಮೀಪದ ಪೆಮ್ಮನಹಳ್ಳಿ ಕೆರೆಯ ದುಃಸ್ಥಿತಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 20:17 IST
Last Updated 23 ಆಗಸ್ಟ್ 2019, 20:17 IST
ಪೆಮ್ಮನಹಳ್ಳಿ ಕೆರೆಯಂಗಳದಲ್ಲಿ ತ್ಯಾಜ್ಯ ಸುರಿದಿರುವುದು
ಪೆಮ್ಮನಹಳ್ಳಿ ಕೆರೆಯಂಗಳದಲ್ಲಿ ತ್ಯಾಜ್ಯ ಸುರಿದಿರುವುದು   

ದಾಬಸ್ ಪೇಟೆ: ನೀರಿನೊಂದಿಗೆ ನಳನಳಿಸಬೇಕಾದ ಕೆರೆಯ ಅಂಗಳ ಕಟ್ಟಡದ, ಅಂಗಡಿಗಳ ಹಾಗೂ ಜನರಿಗೆ ಬೇಡವಾದ ತ್ಯಾಜ್ಯವನ್ನು ತುಂಬಿಕೊಳ್ಳುವ ಪ್ರದೇಶವಾಗಿದೆ.

ಕೆರೆಯಂಗಳಕ್ಕೆ ಪ್ಲಾಸ್ಟಿಕ್‌ ಚೀಲಗಳಲ್ಲಿಯೂ ತ್ಯಾಜ್ಯ ತಂದು ಹಾಕಲಾಗುತ್ತಿದೆ. ಯಾರ ಹಂಗು ಇಲ್ಲದೆ ಇಲ್ಲಿನ ಮಣ್ಣನ್ನು ಜೆಸಿಬಿಗಳಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದಾರೆ. ಕೆರೆಯ ಏರಿಯೆಲ್ಲಾ ಗಿಡಗಂಟಿಗಳಿಂದ ಆವರಿಸಿದೆ. ರಾಜಕಾಲುವೆಗಳು ಕಣ್ಮರೆಯಾಗಿದೆ.

ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 207ಕ್ಕೆ ಹೊಂದಿಕೊಂಡಂತೆ ಇರುವ ದಾಬಸ್ ಪೇಟೆ ಹತ್ತಿರದ ಪೆಮ್ಮನಹಳ್ಳಿ ಕೆರೆ ದುಃಸ್ಥಿತಿ ಇದು. ಕೆರೆಯು ಸರ್ವೆ ನಂ.3ರಲ್ಲಿ 3 ಎಕರೆ 39 ಗುಂಟೆ ಇದೆ. ಇದು, ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಡಲಿದೆ.

ADVERTISEMENT

‘ಜನರು ತ್ಯಾಜ್ಯವನ್ನು ತಂದು ಕೆರೆ ಅಂಗಳದಲ್ಲಿ ಸುರಿಯುತ್ತಿದ್ದಾರೆ. ಪಾಸ್ಟಿಕ್ ಮತ್ತು ಇನ್ನಿತರ ತ್ಯಾಜ್ಯಕ್ಕೆ ಬೆಂಕಿಯಿಟ್ಟು ಹೋಗುತ್ತಾರೆ. ಸುಟ್ಟ ತ್ಯಾಜ್ಯದಿಂದ ಕೆಲ ಅಪಾಯಕಾರಿ ವಿಷ ವಸ್ತುಗಳು ನೀರಿಗೆ ಸೇರುತ್ತಿವೆ. ಆ ನೀರನ್ನು ದನ ಕರುಗಳು ಸೇವಿಸಿದರೆ ಅನೇಕ ರೋಗರುಜಿನಗಳು ಬರುತ್ತವೆ’ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

ಅನುಮತಿ ಪಡೆದೋ, ಪಡೆಯ ದೆಯೋ ಕೆರೆಯಂಗಳದಲ್ಲಿ ಅಡ್ಡಾದಿಡ್ಡಿ ಮಣ್ಣು ಎತ್ತಲಾಗಿದೆ. ಇದರಿಂದ ಗುಂಡಿ
ಗಳು ಉಂಟಾಗಿವೆ. ಕೆರೆ ಕುಂಟೆಗಳನ್ನು ಕಾಪಾಡಬೇಕಾದವರು ಯಾರು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಾರೆ.

’ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ ಅವರನ್ನು ಶುಕ್ರವಾರ ಸ್ಥಳಕ್ಕೆ ಕಳುಹಿಸಿ, ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ’ ಎಂದು ತಹಶೀಲ್ದಾರ್‌ ಕೆ.ಎನ್.ರಾಜಶೇಖರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.