ADVERTISEMENT

‘ದಕ್ಲ ಕಥಾ’ ನಾಟಕ ಪ್ರದರ್ಶನ ನಾಳೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 22:09 IST
Last Updated 5 ಜನವರಿ 2023, 22:09 IST
ದಕ್ಲ ಕಥಾ ದೇವಿ ಕಾವ್ಯ ನಾಟಕದ ದೃಶ್ಯ
ದಕ್ಲ ಕಥಾ ದೇವಿ ಕಾವ್ಯ ನಾಟಕದ ದೃಶ್ಯ   

ಬೆಂಗಳೂರು: ತಳಸಮುದಾಯಗಳ ಕುಲ ಪುರಾಣಗಳನ್ನು ಕಥಾವಸ್ತುವನ್ನಾಗಿ ಹೊಂದಿದ ‘ದಕ್ಲ ಕಥಾ ದೇವಿ ಕಾವ್ಯ’ ಎಂಬ ವಿಶಿಷ್ಟ ನಾಟಕದ ಪ್ರದರ್ಶನವನ್ನು ಇದೇ 7ರಂದು (ಶನಿವಾರ) ರಾತ್ರಿ 7ಕ್ಕೆ, ದೊಮ್ಮಲೂರಿನ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.

ಪುರಾಣವನ್ನು ವರ್ತಮಾನದ ನೆಲೆಯಲ್ಲಿ ಕಲೆಗೆ ಒಗ್ಗಿಸುವ ಕೆಲಸ ಕನ್ನಡ ರಂಗಭೂಮಿಗೆ ಹೊಸದೇನಲ್ಲ. ಆದರೆ, ತಳಸಮುದಾಯಗಳ ಕುಲ ಪುರಾಣಗಳನ್ನು ನಾಟಕವಾಗಿ ಕಟ್ಟಿ, ಕುಣಿದ ಉದಾಹರಣೆಗಳು ಕನ್ನಡ ಶಿಷ್ಟ ರಂಗಪರಂಪರೆಯಲ್ಲಿ ವಿರಳ. ಕೆ.ಬಿ. ಸಿದ್ದಯ್ಯ ಅವರ ಬದುಕನ್ನೂ, ಕಾವ್ಯವನ್ನೂ, ಬರಹವನ್ನೂ, ಅವುಗಳ ಜೀವಾಳವನ್ನೂ ಆಧಾರವಾಗಿಟ್ಟುಕೊಂಡು, ದಲಿತರ ಕುಲಪುರಾಣವನ್ನು
ಈ ನಾಟಕದಲ್ಲಿ ಹೊಸದಾಗಿ ಕಾಣಿಸಲಾಗುತ್ತಿದೆ.

ಸಿದ್ದಯ್ಯ ಅವರ ಬಾಲ್ಯದ ಕಥನದೊಂದಿಗೆ ಆರಂಭವಾಗುವ ನಾಟಕ ದಕ್ಲ ದೇವಿ, ದಕ್ಲ, ದಕ್ಲನ ಎಡ-ಬಲ ಮಕ್ಕಳ ಕಥೆಗಳ ಮೂಲಕ ಹಾದು ಹೋಗುತ್ತದೆ. ಮನುಷ್ಯನನ್ನು ಮನುಷ್ಯನನ್ನಾಗಿ ಕಾಣಿಸುವಂತಹ ಬೆಳಕಿಗಾಗಿಯೂ ನಾಟಕ ಹಂಬಲಿಸುತ್ತದೆ. ಅರೆ, ತಮಟೆಗಳ ಕಂಪನ ಆರಂಭದಿಂದ ಕೊನೆಯವರೆಗೂ ಈ ಪ್ರಯೋಗದಲ್ಲಿ ಆವರಿಸಿಕೊಂಡು ನಾಟಕಕ್ಕೊಂದು ವಿಶಿಷ್ಟ ಅನುಭೂತಿ ನೀಡುತ್ತದೆ. ಲಕ್ಷ್ಮಣ ಕೆ.ಪಿ. ಅವರು ರಚಿಸಿ, ನಿರ್ದೇಶಿಸಿದ ಈ ನಾಟಕದಲ್ಲಿ ಕಲಾವಿದರಾದ ಬಿಂದು ರಕ್ಷಿದಿ, ರಮಿಕ ಚೈತ್ರ, ಸಂತೋಷ್ ದಿಂಡಗೂರು, ನರಸಿಂಹರಾಜು ಬಿ.ಕೆ., ಭರತ್‌ ಡಿಂಗ್ರಿ ಅಭಿನಯಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.