ADVERTISEMENT

ಬೆಂಗಳೂರು: ಆ. 22ರಂದು ಬೇಂದ್ರೆ ಬೆರಗಿನ ಸಂಜೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2023, 14:23 IST
Last Updated 20 ಆಗಸ್ಟ್ 2023, 14:23 IST
ದ.ರಾ. ಬೇಂದ್ರೆ
ದ.ರಾ. ಬೇಂದ್ರೆ   

ಬೆಂಗಳೂರು: ಕವಿ ಬೇಂದ್ರೆಯವರ ಕಾವ್ಯದ ಮುಖ್ಯ ಪ್ರತಿಮೆಗಳಲ್ಲಿ ಒಂದಾದ ‘ಭೃಂಗ’ದ ಬೆನ್ನೇರಿ ಸೃಜನಶೀಲತೆಯ ಹುಡುಕಾಟ ನಡೆಸುವಂತಹ ಮಾತು–ಹಾಡಿನ ವಿಶಿಷ್ಟ ಜುಗಲ್‌ಬಂದಿ ಪ್ರಯತ್ನವೊಂದು ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಆ. 22ರಂದು ಸಂಜೆ 6ಕ್ಕೆ ನಡೆಯಲಿದೆ.

‘ಬೇಂದ್ರೆ ಬೆರಗು’ ಹೆಸರಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಸಂಸ್ಕೃತಿಯ ಪ್ರಾಚೀನತೆ ಮತ್ತು ಆಧುನಿಕತೆಯನ್ನು ಏಕತ್ರ ಮೇಳವಿಸಿ ನೋಡುವ ಚಿಂತಕ ಬಸವರಾಜ ಕಲ್ಗುಡಿ ಅವರು ನಡೆಸಿಕೊಡಲಿದ್ದಾರೆ. ಗಾಯಕ ರಾಮಚಂದ್ರ ಹಡಪದ ಅವರು ಬೇಂದ್ರೆ ಗೀತೆಗಳನ್ನು ಹಾಡಲಿದ್ದಾರೆ.

ಬೇಂದ್ರೆ ಅವರ ಸೃಜನಶೀಲತೆಯು ವರ್ತಮಾನಕ್ಕೆ ಅನುಗುಣವಾದ ಭಾಷೆ ಮತ್ತು ಶೈಲಿಯನ್ನು ಸೃಷ್ಟಿಸಿತು ಎನ್ನುವುದು ಮಹತ್ವದ ವಿಚಾರ. ಈ ಕವಿಗೆ ಗಂಡು–ಹೆಣ್ಣು, ಪ್ರಕೃತಿ–ಪುರುಷ, ಎರಡು ಬಹುಮುಖ್ಯ ದ್ರವ್ಯಗಳಾಗಿವೆ. ಇವುಗಳ ತೀವ್ರ ಪ್ರೀತಿಯ ಸಾಹಚರ್ಯದಲ್ಲಿಯೇ ಸೃಜನಶೀಲತೆಯ ಉಗಮ ಎನ್ನುವುದು ಕವಿಯ ಗಟ್ಟಿಯಾದ ನಂಬಿಕೆ. ಅವರ ಕಾವ್ಯದಲ್ಲಿ ‘ಭೃಂಗ’  ಇಂಥ ತಾತ್ವಿಕತೆಯನ್ನು ಹಿಡಿಯುವ ಮುಖ್ಯವಾದ ಪ್ರತಿಮೆಯಾಗಿದೆ. ಬೇಂದ್ರೆಯವರ ಕವನಗಳಲ್ಲಿ ಭೃಂಗ ಒಂದು ಸಂಕೀರ್ಣ ಪ್ರತಿಮೆಯಾಗಿ ಹೇಗೆ ರೂಪುಗೊಂಡಿತು ಎಂಬುದನ್ನು ಕಲ್ಗುಡಿ ಅವರು ಕೆದಕಲಿದ್ದಾರೆ.

ADVERTISEMENT

ಸಂಸ್ಕೃತಿ ಚಲನೆಯನ್ನು ವಿವಿಧ ನೆಲೆಗಳಲ್ಲಿ ವಿಶ್ಲೇಷಿಸುವ ಕಲ್ಗುಡಿ ಅವರು, ಪ್ರತಿಮೆಗಳ ಕುರಿತು ಚರ್ಚಿಸುತ್ತಲೇ ಬೇಂದ್ರೆ ಅವರ ಕಾವ್ಯದ ಎಲ್ಲ ಮಗ್ಗಲುಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ. ಕಬೀರ ವಾಣಿಯನ್ನು ನಾಡಿನ ತುಂಬಾ ಪಸರಿಸಿದ ಹಡಪದ ಅವರು ಬೇಂದ್ರೆ ಕಾವ್ಯದ ‘ಸ್ಪೆಷಲಿಸ್ಟ್‌’ ಆಗಿಯೂ ಗುರ್ತಿಸಿಕೊಂಡವರು. ಅವರ ಗಾಯನ ಕಾರ್ಯಕ್ರಮಕ್ಕೆ ಇನ್ನಷ್ಟು ಕಳೆಗಟ್ಟಲಿದೆ.

ಬಸವರಾಜ ಕಲ್ಗುಡಿ
ರಾಮಚಂದ್ರ ಹಡಪದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.