ಬೆಂಗಳೂರು: ‘ಚಿಕಿತ್ಸೆ ಕೊಡಿಸಲು ಅಪ್ಪನ ಬಳಿ ದುಡ್ಡಿಲ್ಲ, ದುಡಿಮೆಯೂ ಇಲ್ಲ. ಜೀವನ ನಡೆಸುವುದೇ ಕಷ್ಟವಾಗಿದೆ, ದಯವಿಟ್ಟು ಅಪ್ಪನಿಗೆ ಕೆಲಸ ಕೊಡಿ’ ಎಂದು ಕೃತಕ ಕೈ ಜೋಡಣೆ ಮಾಡಿಸಿಕೊಂಡಿರುವ ಎಂಟು ವರ್ಷದ ಬಾಲಕಿ ಮಾಡಿದ ಒಂದೇ ಮನವಿಗೆ ಕರಗಿದ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ಸ್ಥಳದಲ್ಲೇ ಮರುನೇಮಕ ಆದೇಶ ಹೊರಡಿಸಿ ಮಾನವೀಯತೆ ಮೆರೆದರು.
ಚಿಕ್ಕಮಗಳೂರು ವಿಭಾಗದ ಚಾಲಕ ಕಂ ನಿರ್ವಾಹಕ ಲೋಕೇಶ್ ಅವರು ದೀರ್ಘಕಾಲದ ಗೈರು ಹಾಜರಿಯಿಂದ ವಜಾಗೊಂಡಿದ್ದರು. ಅದರ ನಡುವೆ ಎಡಗೈ ಕಳೆದುಕೊಂಡ ಮಗಳಿಗೆ ಕೃತಕ ಕೈಜೋಡಣೆ ಮಾಡಿಸಲು ಸುತ್ತಾಡಿ ಸುಸ್ತಾಗಿದ್ದರು. ಮಗಳು ಭೂಮಿಕಾ ಜತೆ ಕಚೇರಿಗೆ ಬಂದು ಅನ್ಬುಕುಮಾರ್ ಅವರನ್ನು ಭೇಟಿಯಾದರು.
ಬಾಲಕಿಗೆ ಚಾಕೊಲೇಟ್ ನೀಡಿದ ಅನ್ಬುಕುಮಾರ್, ‘ಅಪ್ಪನಿಗೆ ಕೆಲಸ ಕೊಡಬೇಕಾ’ ಎಂದು ಪ್ರಶ್ನಿಸಿದರು. ‘ಹೌದು ಸರ್, ಕೆಲಸ ಬೇಕು’ ಎಂದು ಮಗು ಕೇಳಿದ ಮುಗ್ಧತೆಗೆ ಮರುಗಿ ಸ್ಥಳದಲ್ಲೇ ಮರುನೇಮಕ ಆದೇಶ ಹೊರಡಿಸಿದರು.
‘ಮಗುವಿಗಾಗಿ ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳುತ್ತಿದ್ದೇನೆ. ಮತ್ತೊಮ್ಮೆ ಗೈರು ಹಾಜರಿಯಾದರೆ ವಿನಾಯಿತಿ ನೀಡದೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಲೋಕೇಶ್ಗೆ ಎಚ್ಚರಿಕೆಯನ್ನೂ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.