ಬಿಬಿಎಂಪಿ
ಬೆಂಗಳೂರು: ‘ಬಿಬಿಎಂಪಿಯಲ್ಲಿ ಖಾಲಿ ಇರುವ 14 ಸಾವಿರ ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಪೌರಕಾರ್ಮಿಕರು, ನೇರ ವೇತನ ಪೌರಕಾರ್ಮಿಕರು ಮತ್ತು ಚಾಲಕರ ಶುಚಿಗಾರರ ಸಂಘಟನೆ ಒಕ್ಕೂಟದ ಅಧ್ಯಕ್ಷ ಎನ್. ವೆಂಕಟರಮಣ ಆಗ್ರಹಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐಪಿಡಿ ಸಾಲಪ್ಪ ಅವರ ವರದಿಯಂತೆ ಪೌರಕಾರ್ಮಿಕರಿಗೆ ಆರ್ಥಿಕ ಭದ್ರತೆ, ಶೈಕ್ಷಣಿಕ ಸ್ಥಿತಿಗತಿ, ಕಾಯಂ ನೌಕರಿ, ಊಟ, ವಸತಿ, ಸಮಾನ ವೇತನ ನೀಡಬೇಕು. ವರದಿಯಲ್ಲಿನ 36 ಅಂಶಗಳನ್ನು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಒಪ್ಪಿಕೊಂಡಿದ್ದರು. ಆದರೆ, ವರದಿ ಅನ್ವಯ ಕಾರ್ಮಿಕರ ಸೌಲಭ್ಯಗಳು ಸಂಪೂರ್ಣವಾಗಿ ಜಾರಿಯಾಗಿಲ್ಲ’ ಎಂದರು.
ಇದೇ 14ರಂದು ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ‘ಐಪಿಡಿ ಸಾಲಪ್ಪ ವರದಿ’ಯ ಕುರಿತು ವಿಚಾರಸಂಕಿರಣ ಹಮ್ಮಿಕೊಳ್ಳಲಾಗಿದೆ. ಈ ವಿಚಾರಸಂಕಿರಣದಲ್ಲಿ ಪೌರಕಾರ್ಮಿಕ ನೇಮಕಾತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗುವುದು’ ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ತ್ಯಾಗರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.